ಮಂಡ್ಯ, ಎ.11: ಮಾರಕ ಕೊರೋನ ಸೋಂಕು ರಾಜ್ಯಕ್ಕೆ ಕಂಟಕವಾಗಿ ಪರಿಣಮಿಸಿದ್ದು, ಜನತೆ ನಲುಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲೂ ಕೊರೋನ ಆತಂಕ ತಟ್ಟಿದೆ. ಜಿಲ್ಲೆಯಲ್ಲಿ ತಂಗಿದ್ದ ಐವರು ತಬ್ಲಿಘಿಗಳಲ್ಲಿ ಮಾರಕ ಕೊರೋನ ವೈರಸ್ ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಅಗತ್ಯ ಕ್ರಮ ಮತ್ತಷ್ಟು ಬಿಗಿ ಗೊಳಿಸಲಾಗಿದೆ.

ಮಳವಳ್ಳಿಯಲ್ಲಿ ನಾಲ್ವರು ಧರ್ಮ ಗುರುಗಳ ಸಂಪರ್ಕದಲ್ಲಿದ್ದ ಜನರನ್ನು ಕ್ವಾರೆಂಟೈನ್ ಮಾಡಿದ್ದು, ಇಡೀ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಮಳವಳ್ಳಿಯ ಈದ್ಗಾ ಮೊಹಲ್ಲಾ, ಕೋಟೆ ಕಾಳಮ್ಮನ ಬೀದಿಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಇದರೊಂದಿಗೆ ಜನತೆಗೆ ಅಗತ್ಯ ಎಚ್ಚರಿಕೆ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ. ಇನ್ನು ಸೋಂಕು ಪೀಡಿತರೊಂದಿಗೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲೂ ಕೆಲವು ವಾರ್ಡ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ. ಮಂಡ್ಯದ ವಾರ್ಡ್ ನಂ.30, 32 ಹಾಗೂ 33ನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.













