ಮಂಗಳೂರು: ಪೊಲೀಸ್ ಸರ್ಪಗಾವಲು ನಡುವೆಯೂ ಐಜಿಪಿ ಬಂಗಲೆಯಿಂದ ಕಳ್ಳತನ ► ತಿಂಗಳು ಕಳೆದರೂ ಕಳ್ಳರ ಪತ್ತೆ ಮಾಡಲಾಗದೆ ಪೊಲೀಸರ ನಿರ್ಲಕ್ಷ್ಯತನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.30. ಪೊಲೀಸರು ಎಂದರೆ ಜನರ ರಕ್ಷಣೆಗೆಂದು ಇರುವ ಇಲಾಖೆಯಾಗಿದ್ದು, ಸಮಾಜದ ರಕ್ಷಣೆಯ ಹೊಣೆಗಾರಿಕೆ ಪೊಲೀಸ್ ಇಲಾಖೆಯ ಮೇಲಿದೆ.ಆದರೆ ಬರೋಬ್ಬರಿ 15 ಪೊಲೀಸರನ್ನು ಸೇವೆಗೆಂದು ನಿಯೋಜಿಸಲ್ಪಟ್ಟಿರುವ ಐಜಿಪಿ ಬಂಗಲೆಯಲ್ಲಿ ಕಳ್ಳತನ ನಡೆದಿದೆ ಎಂದರೆ ನಂಬಬಹುದಾ..? ನಂಬಲೇ ಬೇಕು…

ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ ಪಕ್ಕದಲ್ಲಿರುವ ಪಶ್ಚಿಮ ವಲಯ ಐಜಿಪಿಯವರ ನಿವಾಸದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ಎಕರೆ ವ್ಯಾಪ್ತಿಯಲ್ಲಿರುವ ಈ ಬಂಗಲೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆಯಾ ಎನ್ನುವ ಸಂಶಯ ಉಂಟಾಗಿದೆ. ಯಾಕಂದ್ರೆ ಭದ್ರವಾದ ಕಾಂಪೌಂಡ್ ಹಾಗೂ 15 ಮಂದಿ ಪೊಲೀಸರ ಭದ್ರತೆ ಇರುವ ಈ ಬಂಗ್ಲೆಯ ಆವರಣದಿಂದ 2 ಲಕ್ಷ ಮೌಲ್ಯದ 5 ಶ್ರೀಗಂಧ ಮರಗಳು ರಾತ್ರೋರಾತ್ರಿ ಕಳ್ಳತನವಾಗಿವೆ. ದೊಡ್ಡದಾಗಿ ಬೆಳೆದಿದ್ದ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಐದು ಮರಗಳನ್ನು ಬುಡದಿಂದಲೇ ಕತ್ತರಿಸಿ ಸಾಗಿಸಲಾಗಿದೆ‌.

ಘಟನೆಯು ಕಳೆದ ಜುಲೈ ತಿಂಗಳ 28ರಂದು ನಡೆದಿತ್ತು. ಕಳ್ಳತನ ನಡೆದಾಗ ಹರಿಶೇಖರನ್ ಐಜಿಪಿಯಾಗಿದ್ದರು. ನಂತರ ಹೇಮಂತ್ ನಿಂಬಾಳ್ಕರ್ ಐಜಿಪಿಯಾಗಿ ಬಂದ ಬಳಿಕ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿ ತಿಂಗಳಾಗ್ತಾ ಬಂದರೂ ತನಿಖೆ ನಡೆದಿಲ್ಲ. ಪ್ರಕರಣ ಇನ್ನೂ ಅರಣ್ಯ ಇಲಾಖೆಗೆ ಹಸ್ತಾಂತರವಾಗಿಲ್ಲ. ಹೀಗಾಗಿ ಪೊಲೀಸರೇ ಶ್ರೀಗಂಧದ ಮರಗಳನ್ನು ಕದ್ದು ಸಾಗಿಸಿದ್ದಾರಾ ಎನ್ನುವ ಅನುಮಾನ ಮೂಡಲಾರಂಭಿಸಿದೆ.

error: Content is protected !!

Join the Group

Join WhatsApp Group