ಕಡಬ ಮೆಸ್ಕಾಂ ಎಇ ಮತ್ತು ಗುತ್ತಿಗೆದಾರರಿಗೆ ಅವಾಚ್ಯ ನಿಂದನೆ ಆರೋಪ ➤ ‘ಸೊಬಗು ನ್ಯೂಸ್‌’ ಬ್ಲಾಗ್‌ನ ಅನೀಶ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಮಾ.13. ಕೋಡಿಂಬಾಳ ಗ್ರಾಮದ ನಾಕೂರು ಎಂಬಲ್ಲಿನ ವಿದ್ಯುತ್ ಕಾಮಗಾರಿಯೊಂದರ ಕುರಿತಂತೆ ಕಡಬ ಮೆಸ್ಕಾಂ ಎ.ಇ ಹಾಗೂ ವಿದ್ಯುತ್ ಗುತ್ತಿಗೆದಾರರಿಗೆ ಕಡಬದ ಸೊಬಗು ನ್ಯೂಸ್ ಬ್ಲಾಗ್‌ನ ಅನಿಶ್ ಕೋಡಿಂಬಾಳ ಅವರು ಅವಾಚ್ಯ ಶಬ್ದ ಬಳಸಿ ನಿಂದನೆ ಹಾಗೂ ಬೆದರಿಕೆ ಒಡ್ಡಿದ ಹಿನ್ನಲೆಯಲ್ಲಿ ಅವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳುವಂತೆ ಪುತ್ತೂರು ಜೆ.ಎಮ್.ಎಫ್.ಸಿ ನ್ಯಾಯಾಲಯ ಕಡಬ ಪೋಲಿಸರಿಗೆ ಆದೇಶ ನೀಡಿದ್ದು, ಈ ಬಗ್ಗೆ ಅನಿಶ್ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಡಿಂಬಾಳ ಗ್ರಾಮದ ನಾಕೂರು ಎಂಬಲ್ಲಿ ಮೆಸ್ಕಾಂ ವತಿಯಿಂದ ಪರಿವರ್ತಕ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಈ ಸಂಬಂಧ ಫೆಬ್ರವರಿ 25ರಂದು ಕಡಬದ ಸೊಬಗು ನ್ಯೂಸ್ ಎಂಬ ಬ್ಲಾಗ್‌ನ ಕೋಡಿಂಬಾಳ ನಿವಾಸಿ ಅನಿಶ್ ಎಂಬವರು ಕಡಬದ ಮೆಸ್ಕಾಂ ಎ.ಇ. ಸತ್ಯನಾರಾಯಣ ಎಂಬವರಿಗೆ ಕರೆ ಮಾಡಿ ಕಾಮಗಾರಿ ಯಾಕೆ ವಿಳಂಬವಾಗಿದೆ ಎಂದು ಪ್ರಶ್ನಿಸಿದ್ದಾರೆನ್ನಲಾಗಿದ್ದು ಇದಕ್ಕೆ ಎ.ಇ.ಯವರು ಸ್ಪಷ್ಟನೆ ನೀಡಿ ಕಾಮಗಾರಿ ಪ್ರಗತಿಯಲ್ಲಿದೆ, ಇಲಾಖೆಯಿಂದ ಸಾಮಾಗ್ರಿಗಳು ಸಿಕ್ಕಿದ ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದರು. ಆದರೆ ಇದಕ್ಕೆ ಅನೀಶ್ ರವರು ಕಾಮಗಾರಿ ಪೂರ್ಣಗೊಳಿಸದಿದ್ದರೆ ನಾನು ಸುಮ್ಮನಿರುವುದಿಲ್ಲ, ನಾನು ಪತ್ರಕರ್ತನಾಗಿದ್ದು, ನಿಮ್ಮನ್ನು ಹಾಗೂ ಗುತ್ತಿಗೆದಾರರನ್ನು ಏನು ಮಾಡಬೇಕೆಂದು ನನಗೆ ಗೊತ್ತಿದೆ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ಸತ್ಯನಾರಾಯಣ ಅವರು ಪುತ್ತೂರು ನ್ಯಾಯಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದು, ಈ ಹಿನ್ನಲೆಯಲ್ಲಿ ನ್ಯಾಯಾಲಯವು ಅನಿಶ್ ವಿರುದ್ದ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶ ನೀಡಿದೆ.

ಇದೇ ವಿಚಾರದಲ್ಲಿ ಎ.ಇ. ಸತ್ಯನಾರಾಯಣ ಅವರ ಆದೇಶದ ಮೇರೆಗೆ ವಿದ್ಯುತ್ ಗುತ್ತಿಗೆದಾರ ನೂಜಿಬಾಳ್ತಿಲ ನಿವಾಸಿ ಅಭಿಲಾಷ್ ಪಿ.ಕೆ. ಎಂಬವರು ಅನಿಶ್ ಅವರಿಗೆ ಕಾಮಗಾರಿಯ ಬಗ್ಗೆ ಸ್ಪಷ್ಟನೆ ನೀಡಲು ಕರೆ ಮಾಡಿದ್ದ ವೇಳೆ ಅನಿಶ್ ಅವರು ಅಭಿಲಾಷ್ ಅವರ ತಾಯಿಯ ಶೀಲದ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೆ ಈ ಹಿಂದೆಯೂ ಪತ್ರಕರ್ತನೆಂದು ಹೇಳಿಕೊಂಡು ಇದೇ ರೀತಿ ಹಿಂದೆಯೂ ತೊಂದರೆ ಕೊಡುತ್ತಿದ್ದರು ಎಂದು ಅಭಿಲಾಷ್ ಅವರು ಆರೋಪಿಸಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದು, ನ್ಯಾಯಾಲಯವು ಅನಿಶ್ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಸೆಕ್ಷನ್ 353/383/502ರಂತೆ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group