ಮಂಗಳೂರು: ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಂಗಳೂರು, ಫೆ.29: ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ತಲವಾರಿನಿಂದ ಕಡಿದು ಹತ್ಯೆ ಮಾಡಿದವ ಪತಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ನೀಡಿದೆ.

ಶಿಕ್ಷೆಗೊಳಗಾದವರನ್ನು ಮೂಲತಃ ಬಾಗಲಕೋಟೆಯ ಕೆಲ್ಲೂರು ನಿವಾಸಿ, ದೇರೆಬೈಲ ಕೊಂಚಾಡಿ ಗ್ರಾಮದ ಬೋರುಗುಡ್ಡೆಯಲ್ಲಿ ವಾಸವಿದ್ದ ಶರಣಪ್ಪಬಾಳಪ್ಪ (48) ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಮಂಜುಳಾ (38)ರನ್ನು 2019ರ ಎ.20ರಂದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.

ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿದ್ದ ಬಗ್ಗೆ ಪೊಲೀಸ್‌ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು. 2019 ರ ಎ.20ರಂದು ಆರೋಪಿ ತನ್ನ ಪತ್ನಿಯನ್ನು ಬೆಡ್‌ರೋಮ್‌ನಲ್ಲಿ ಹತ್ಯೆ ಮಾಡಿದ್ದು ಬೊಬ್ಬೆ ಕೇಳಿ ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಕಾವೂರು ಎಸ್ಸೈ ಹರೀಶ್ ಪ್ರಕರಣ ದಾಖಲಿಸಿಕೊಂಡು, ಕಾವೂರು ಪೊಲೀಸ್ ಠಾಣೆಯ ಅಂದಿನ ಪೊಲೀಸ್‌ಇನ್‌ಸ್ಪೆಕ್ಟರ್ ಕೆ.ಆ.ನಾಯಕ್ ಆರೋಪ ಪಟ್ಟಿ ಸಲ್ಲಿಸಿದ್ದರು. ಇತ್ತೀಚೆಗೆ ಹಾಲಿ ಇನ್‌ಸ್ಪೆಕ್ಟರ್ ರಾಘವ ಪಡೀಲ್ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 18 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ.

ತಾಯಿ ಹತ್ಯೆಯಾಗಿ ತಂದೆ ಜೈಲಿನಲ್ಲಿರುವ ಕಾರಣದಿಂದಾಗಿ ಮೂವರು ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ನಿಡಲು ನ್ಯಾಯಾಧೀಶರು ಶಿಫಾರಸು ಮಾಡಿದ್ದಾರೆ. ಪ್ರಸ್ತುತ ಮಕ್ಕಳು ಅಜ್ಜಿ ಮನೆಯಲ್ಲಿದ್ದಾರೆ.

error: Content is protected !!

Join the Group

Join WhatsApp Group