ಬೆಂಗಳೂರು: ಪ್ರೀ ಕಾಶ್ಮೀರ ಬಿತ್ತಿ ಪತ್ರ ಪ್ರದರ್ಶಿಸಿದ ಯುವತಿ ಪೊಲೀಸ್ ವಶಕ್ಕೆ

ಬೆಂಗಳೂರು, ಫೆ.21: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿ ಬಂಧನಕ್ಕೊಳಗಾಗಿರುವ ಅಮೂಲ್ಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ಭಿತ್ತಿಪತ್ರ ಪ್ರದರ್ಶಿಸಿ, ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಮತ್ತೋರ್ವ ಯುವತಿಯನ್ನು ಎಸ್‌ಜೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಟೌನ್ ಹಾಲ್ ಬಳಿ ಹಿಂದೂಪರ ಸಂಘಟನೆ, ಕನ್ನಡ ಪರ ಹೋರಾಟಗಾರರು, ನಿನ್ನೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದ ಅಮೂಲ್ಯ ಲಿಯೋನ್ ವಿರುದ್ಧ ಪ್ರತಿಭಟನೆ ಮಾಡುವಾಗ ಯುವತಿಯೊಬ್ಬಳು ಭಿತ್ತಿಪತ್ರವೊಂದು ಪ್ರದರ್ಶನ ಮಾಡಿ, ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಳೆ ಎನ್ನಲಾಗಿದೆ.

ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಎಸ್‌ಜೆ ಪೊಲೀಸ್ ಠಾಣೆಗೆ ತೆರಳಿ, ಯುವತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸುದ್ದಿಗಾರರೊಂದಿಗೆ ಮಾತನಾಡಿ, ಯುವತಿ ಘೋಷಣೆ ಕೂಗಿರುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತನಿಖೆ ನಂತರ ಆ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು.

12.15ರ ಸುಮಾರಿಗೆ ಯುವತಿ ಭಿತ್ತಿ ಪತ್ರ ತಂದಿದ್ದು, ಭಿತ್ತಿ ಪತ್ರದಲ್ಲಿ ಮುಕ್ತಿ ಕಾಶ್ಮೀರ, ಮುಕ್ತಿ ಮುಸ್ಲಿಂ, ಮುಕ್ತಿ ದಲಿತ್ ಎಂದು ಬರೆಯಲಾಗಿತ್ತು ಎಂದರು.
ಯುವತಿ ಮೇಲೆ ಯಾವುದೇ ರೀತಿಯ ಹಲ್ಲೆ ಆಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಪಾಕಿಸ್ತಾನ ಜಿಂದಾಬಾದ್ ಎಂದು ಯುವತಿ ಕೂಗಿದ್ದಾಳೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಘಟನೆಯ ಸಂಪೂರ್ಣ ದೃಶ್ಯಾವಳಿ ನಮ್ಮ ಬಳಿ ಇದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಯುವತಿಯ ಹೆಸರು, ವಿಳಾಸದ ಬಗ್ಗೆ ಮಾಹಿತಿ ಇಲ್ಲ. ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ ಎಂದರು.
ಸದ್ಯ ಘೋಷಣೆ ಕೂಗಿದ್ದ ಯುವತಿ ಮಲ್ಲೇಶ್ವರಂ ನಿವಾಸಿ ಅರುದ್ರಾ ಎನ್ನಲಾಗಿದ್ದು, ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

error: Content is protected !!

Join the Group

Join WhatsApp Group