ಮಂಗಳೂರು: ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾದ ತಂದೆ-ಮಗ

ಮಂಗಳೂರು, ಫೆ.16: ತಂದೆ ಹಾಗೂ ಐದು ವರ್ಷದ ಪುತ್ರ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರ ನೇತ್ರಾವತಿ ಸೇತುವೆ ಬಳಿ ರವಿವಾರ ಬೆಳಗ್ಗೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ನಾಪತ್ತೆಯಾದವರನ್ನು ಬಂಟ್ವಾಳ, ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ(45), ಹಾಗೂ ಅವರ ಪುತ್ರ ಅನೀಶ್ ರೈ(6) ಎಂದು ಗುರುತಿಸಲಾಗಿದೆ. ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಗೋಪಾಲಕೃಷ್ಣ ರೈ ಅವರು ಕಳೆದ ಎರಡು ದಿನಗಳ ಹಿಂದೆ ಮುಂಬೈಯಿಂದ ಕೊಣಾಜೆಯ ಪಾವೂರಿಗೆ ಸಂಬಂಧಿಕರ ಮನೆಗೆ ನೇಮಕ್ಕೆ ಬಂದಿದ್ದರೆನ್ನಲಾಗಿದೆ.

ರವಿವಾರ ನಸುಕಿನ ಜಾವ 4:30 ರ ಸುಮಾರಿಗೆ ಮಗ ಅನೀಶ್ ರೈ ರೊಂದಿಗೆ ಗೋಪಾಕೃಷ್ಣ ರೈ ಅವರು ಕಾರು ಚಲಾಯಿಸಿ ಮನೆಯಿಂದ ಹೊರಗೆ ಹೊರಟಿದ್ದರು ಎನ್ನಲಾಗಿದ್ದು, ಈ ಕಾರು ರವಿವಾರ ಬೆಳಗ್ಗಿನ ಜಾವ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿದೆ.

ನೇತ್ರಾವತಿ ಸೇತುವೆಯಲ್ಲಿ ಕಾರು ನಿಂತಿದ್ದು ವಾಹನದಲ್ಲಿ ಯಾರು ಇಲ್ಲದ್ದು ನೋಡಿ ಸಾರ್ವಜನಿಕರು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದಾರೆ.

‘ತನಗೆ ಒಂದು ವಾರದಿಂದ ನಿದ್ರೆ ಬರುತ್ತಿಲ್ಲ. ನಾನೊಬ್ಬ ಮಗನನ್ನು ಕೊಲ್ಲುವ ಮಹಾ ಪಾಪಿ. ಇದಕ್ಕಾಗಿ ನನ್ನ ಕ್ಷಮಿಸಿರಿ. ಪತ್ನಿ ಅಶ್ವಿನಿ ರೈ ನಿನ್ನ ಬಿಟ್ಟು ಇಬ್ಬರೂ ದೂರ ಹೋಗುತ್ತಿರುವುದಾಗಿ’ ಡೆತ್ ನೋಟ್ ಬರೆದಿಟ್ಟು ಕೃತ್ಯ ಎಸಗಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಕ್ಕಾಗಿ ಶೋಧಕಾರ್ಯ ಆರಂಭವಾಗಿದೆ.

error: Content is protected !!

Join the Group

Join WhatsApp Group