ಸುರತ್ಕಲ್: ಎನ್‌ಐಟಿಕೆ ಬೀಚ್‌ನಲ್ಲಿ ಮುಳುಗಿ ವಿದ್ಯಾರ್ಥಿನಿ ಮೃತ್ಯು

ಸುರತ್ಕಲ್‌, ಜ 21:ಸುರತ್ಕಲ್‌ ಎನ್‌ಐಟಿಕೆ ಬೀಚ್‌ನಲ್ಲಿ ಆಟವಾಡಲು ತೆರಳಿದ್ದ 20ರಷ್ಟು ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಇನ್ನಿಬ್ಬರನ್ನು ಸ್ಥಳಿಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮೃತಪಟ್ಟ ವಿದ್ಯಾರ್ಥಿನಿಯನ್ನು ಮಧ್ಯಪ್ರದೇಶದ ಸಾಗರ್‌ ನಿವಾಸಿ ವಾರಂಗಲ್‌ ಎನ್‌ಐಟಿಕೆ ವಿದ್ಯಾರ್ಥಿನಿ ನಿರ್ಮಲಾ ದಂಗವಾಲ್‌ ಎಂದು ಗುರುತಿಸಲಾಗಿದೆ.

ಎನ್‌ಐಟಿ ವಾರಂಗಲ್‌ನ 20ರಷ್ಟು ವಿದ್ಯಾರ್ಥಿಗಳು ಸುರತ್ಕಲ್‌ ಎನ್‌ಐಟಿಕೆಯಲ್ಲಿ ನಡೆದಿದ್ದ ಆಲ್‌ ಇಂಡಿಯಾ ಅಂತರ್‌ ಎನ್‌ಐಟಿ ಕ್ರೀಡಕೂಟದಲ್ಲಿ ಭಾಗವಹಿಸಿದ್ದು ಈ ಕ್ರೀಡಾಕೂಟ ಮುಗಿದ ಬಳಿಕ ದೈಹಿಕ ಶಿಕ್ಷಕ ರಾಜು ಒಡೆಲಾ ಅವರೊಂದಿಗೆ ಎನ್‌ಐಟಿಕೆ ಬೀಚ್‌ಗೆ ತೆರಳಿದ್ದರು.

ನೀರಿನಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿನಿಯರ ಪೈಕಿ ನಿರ್ಮಲಾ, ಮೇಘನಾ ಹಾಗೂ ಕನೋಜ್‌ ಎಂಬವರು ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ಮುಳುಗುತ್ತಿದ್ದು ಇತರೆ ವಿದ್ಯಾರ್ಥಿಗಳು ಸಹಾಯಕ್ಕೆಂದು ಕೂಗಿಕೊಂಡಿದ್ದಾರೆ. ಸ್ಥಳೀಯ ರಕ್ಷಣಾ ಕಾರ್ಯಕರ್ತರು ಮೂವರು ವಿದ್ಯಾರ್ಥಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದು ಆ ಪೈಕಿ ನಿರ್ಮಲಾ ದಂಗವಾಲ್‌ ಅವರು ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.

ಈ ಬಗ್ಗೆ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಒಬ್ಬರು ಪ್ರಾಧ್ಯಪಕರು ಈ ಬೀಚ್‌ ಹೆಸರುವಾಸಿಯಾಗಿದ್ದು ಅಲ್ಲಿ ವಿಹರಿಸಿ ಆಟವಾಡಿ. ಆದರೆ ಅತೀ ಎಚ್ಚರವಾಗಿರಿ. ಇಲ್ಲಿನ ಸಮುದ್ರ ಬಹಳ ಅಪಾಯಾಕಾರಿ ಎಂದು ಎಚ್ಚರಿಕೆ ನೀಡಿದ್ದರು.

ಈ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!

Join the Group

Join WhatsApp Group