ಕಡಬದಲ್ಲಿ 37ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ ➤ ತಮ್ಮೊಳಗಿರುವ ರಾಕ್ಷಸಿ ಪ್ರವೃತ್ತಿಯನ್ನು ಮೊದಲು ತೊಲಗಿಸಿದರೆ ಸಮಾಜದಲ್ಲಿ ಶಾಂತಿ – ಒಡಿಯೂರು ಶ್ರೀ

(ನ್ಯೂಸ್ ಕಡಬ) newskadaba.com, ಕಡಬ, ಡಿ.27  ತಮ್ಮೊಳಗೆ ಅಡಗಿರುವ ರಾಕ್ಷಸಿ ಪ್ರವೃತ್ತಿಯನ್ನು ಮೊದಲು ತೊಲಗಿಸಿದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಬಹುದು ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಅವರು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ವತಿಯಿಂದ ನಡೆದ 37ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಇಂದಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಆತಂಕಕಾರಿಯಾಗಿದೆ, ಇದಕ್ಕೆ ಮೂಲ ಕಾರಣ ಮನುಷ್ಯನಲ್ಲಿರುವ ರಾಕ್ಷಸಿ ಪ್ರವೃತ್ತಿ ಅದನ್ನು ಮೊದಲು ತೊಲಗಿಸಿದರೆ, ಸಮಾಜದಲ್ಲಿರುವ ರಾಕ್ಷಸಿ ಪ್ರವೃತ್ತಿಯೂ ಕಡಿಮೆಯಾಗುತ್ತದೆ, ಅಲ್ಲದೆ ಅಂತ ಪ್ರವೃತ್ತಿಯನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ, ನಮ್ಮ ಮಾತಿನಲ್ಲಿ ಹಿಡಿತ ಇರಬೇಕು, ಎಲ್ಲ ಆಗು ಹೋಗುಗಳು ಮಾತಿನಿಂದ ನಡೆಯುತ್ತದೆ ಆದುದರಿಂದ ಅದು ಹಿಡಿತದಲ್ಲಿರುವಂತೆ ನಾವು ನೋಡಿಕೊಳ್ಳಬೇಕು, ಕೆಟ್ಟ ಘಟನೆಗಳಿಗೆ ಸಂಸ್ಕಾರದ ಕೊರತೆಯೇ ಕಾರಣವಾಗುತ್ತಿದ್ದು ಇದಕ್ಕೆ ನಾವು ದೊಡ್ಡ ದೊಡ್ಡ ಧರ್ಮ ಗ್ರಂಥಗಳನ್ನು ಓದಬೇಕಾಗಿಲ್ಲ, ಬದಲಾಗಿ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದ ಧರ್ಮವನ್ನು ನಾವು ಪಾಲಿಸಿದರೆ ಸಾಕು ಯಾಕೆಂದರೆ ನಮ್ಮ ಹಿರಿಯರು ಪ್ರಕೃತಿಯನ್ನು ಆರಾದಿಸಿಕೊಂಡು ಜೀವನ ನಡೆಸಿದವರು, ಆದರೆ ಇಂದಿನ ಆಧುನಿಕ ತಂತ್ರಜ್ಞಾನವೂ ನಮ್ಮನ್ನು ಅಧಪತನಕ್ಕೆ ತಳ್ಳುತ್ತಿದೆ, ನಮ್ಮ ಮಕ್ಕಳು ನಮ್ಮ ಕೈಗೆ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ, ಇದಕ್ಕಾಗಿ ಮಕ್ಕಳಿಗೆ ಧರ್ಮದ ಶಿಕ್ಷಣ ನೀಡುವ ಅನಿವಾರ್ಯತೆ ಎದುರಾಗಿದೆ, ಭಜನೆ ನಮ್ಮ ಮನೆ, ಮನದಲ್ಲಿ ನಿತ್ಯವೂ ಮೊಳಗಲಿ, ಭಜನೆಯ ಮೂಲಕ ಧರ್ಮ ರಕ್ಷಣೆಯ ಕಾರ್ಯ ಮಾಡುತ್ತಿರುವ ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಧಾರ್ಮಿಕ ಉಪನ್ಯಾಸ ನೀಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಜಿಲ್ಲಾ ಕಾರ್ಯದರ್ಶಿ ಅಕ್ಷತ ಬಜ್ಪೆ ಮಾತನಾಡಿ, ಇಂದಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ನಮ್ಮ ಸನಾತನ ಸಂಸ್ಕೃತಿಗಳು ಮರೆಯಾಗುತ್ತಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಗಳು ಕಾಣಿಸಿಕೊಳ್ಳುತ್ತಿದೆ, ವಿಶೇಷ ಏನೆಂದರೆ ಪಾಶ್ಚಿಮಾತ್ಯರು ಮಾತ್ರ ನಮ್ಮ ಸನಾತನ ಸಂಸ್ಕೃತಿಯ ಬಗ್ಗೆ ಒಲವು ತೋರುತ್ತಿದ್ದಾರೆ. ನಮಗೆ ನಮ್ಮ ಧರ್ಮದ ಬಗ್ಗೆ ಚಿಂತನೆ ಬೆಳೆಯಬೇಕಾಗಿದೆ, ಧರ್ಮದ ರಕ್ಷಣೆಗೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆಗೆ ಸಾಧ್ಯ ಇಲ್ಲದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ಯಾರದ್ದೋ ಕೈ ಕೆಳಗೆ ಜೀವಿಸಬೇಕಾದ ಸಂದರ್ಭ ಬರಬಹುದು, ನಾವು ಅಧರ್ಮ ನಡೆಯುತ್ತಿದ್ದಾಗ ಸುಮ್ಮನೆ ಕೂರುವುದು ಸರಿಯಲ್ಲ, ಸನಾತನ ಧರ್ಮ ರಕ್ಷಣೆಗೆ ಎಲ್ಲರೂ ಕೈ ಜೋಡಿಸಿದರೆ ಮಾತ್ರ ಸದೃಢ ಭಾರತ ನಿರ್ಮಾಣವಾಗಬಹುದು ಎಂದ ಅವರು ಇಂದಿನ ಹೆಣ್ಣು ಮಕ್ಕಳು ಮಾತ್ರ ಅತ್ಯಂತ ಜಾಗೃತರಾಗಬೇಕು, ಅವರಲ್ಲಿ ಧರ್ಮ, ಸಂಸ್ಕೃತಿ ಪ್ರಜ್ಞೆ ಬೆಳೆದಾಗ ಮಾತ್ರ ಎಲ್ಲ ಸಮಸ್ಯೆಗಳು ಸರಿಯಾಗಬಹುದು, ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾದವರು ತಾಯಿಯಂದಿರು ಅವರು ಈ ಕೆಲಸವನ್ನು ಮಾಡಿದಾಗ ಮಾತ್ರ ನಮ್ಮ ಕನಸುಗಳು ಸಾಕಾರವಾಗುತ್ತದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಈ ದೇಶದ ಕಾನೂನು ರಾಜಕೀಯ, ಧರ್ಮದ ವಿಚಾರದಲ್ಲಿ ಬಹುಸಂಖ್ಯಾತ ಹಿಂದುಗಳು ಈ ನೆಲದ ಬಗ್ಗೆ ಗೌರವವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತೇವೆ, ಆದರೆ ಕೆಲ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ಈ ನೆಲದ ಬಗ್ಗೆ ಗೌರವವನ್ನು ತೊರೆದು ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸುವ ಕೆಲಸ ನಡೆಯುತ್ತಿದೆ, ಇಡೀ ಪ್ರಪಂಚ ಇಂದು ಭಾರತಕ್ಕೆ ಗೌರವ ಕೊಡುವ ಕೆಲಸವನ್ನು ಮಾಡುತ್ತಿದ್ದರೆ ನಮ್ಮ ದೇಶದ ಜನರೇ ತಲೆ ತಗ್ಗಿಸುವ ಕೆಲಸ ಮಾಡುತ್ತಿದ್ದಾರೆ, ಇದಕ್ಕೆಲ್ಲ ನಾವು ಜಾಗೃತವಾಗಬೇಕಿದೆ, ನಾವು ಜಾಗೃತರಾಗಿ ಒಗ್ಗಟ್ಟಾಗಿ ಈ ದೇಶದ ನೆಲದ ಗೌರವನ್ನು ಕಾಪಾಡಬೇಕಾದ ಕೆಲಸವನ್ನು ಮಾಡಬೇಕಿದೆ, ಇಂತಹ ಧಾರ್ಮಿಕ ಪ್ರಜ್ಞೆಯನ್ನು ಇಂತಹ ಕಾರ್ಯಕ್ರಮಗಳ ಮೂಲಕ ಮಾಡಬೇಕಿದೆ, ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಕಾರ್ಯ ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು. ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಒಡಿಯೂರು ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ ಮಾತನಾಡಿ ಶುಭ ಹಾರೈಸಿದರು. ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಆಡಳಿತಾಧಿಕಾರಿ ನವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ ಸ್ವಾಗತಿಸಿ, ಅಧ್ಯಕ್ಷ ಸೋಮಪ್ಪ ನಾಯಕ್ ವಂದಿಸಿದರು. ದಯಾನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ದೀಪ್ತಿ, ದೀಕ್ಷಾ ಪ್ರಾರ್ಥನೆ ಹಾಡಿದರು. ಭಜನಾ ಮಂಡಳಿಯ ಉಪಾಧ್ಯಕ್ಷ ಯಶೋಧರ ಪೂವಳ, ವೆಂಕಟೇಶ್ ಆರಿಗ, ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕಳಾರ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಗೌಡ ಬೆಳ್ಳಾರೆ, ಕೋಶಾಧಿಕಾರಿ ಸುಖೇಶ್ ಕುಮಾರ್, ಸದಸ್ಯರಾದ ರಂಜಿತ್ ರೈ ಬೆದ್ರಾಜೆ, ಹರಿಪ್ರಸಾದ್ ರೈ ಬೆದ್ರಾಜೆ, ಮಹೇಶ್ ಕುಕ್ಯಾಲ, ರಾಕೇಶ್, ಸಚಿನ್ ಕಳಾರ, ಸಹನ್ ಕಳಾರ, ಚೇತನ್ ಹೊಸ್ಮಠ, ಕು|ಜಾಹ್ನವಿ, ಉದ್ವಲ್, ಕು| ಸಮೃದ್ಧಿ, ಕು| ಅನ್ವಿತ್ ಅತಿಥಿಗಳಿಗೆ ಹೂ ಗುಚ್ಚ ನೀಡಿ ಗೌರವಿಸಿದರು.


ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಮತ್ತು ಭಜನಾ ಸೇವೆ, ಧಾರ್ಮಿಕ ಕ್ಷೇತ್ರ, ಕೃಷಿ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದವರರಿಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಗೌರವಾರ್ಪಣೆ ಸಲ್ಲಿಸಿದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕಡಬ ಅಮೈ ಕೇವಳದ ದಿ.ಗೋಪಾಲಕೃಷ್ಣ ಗೌಡ ಎ.ಕೆ.ಅವರ ಸ್ಮರಣಾರ್ಥ ಪತ್ನಿ ಗೀತಾ ಅವರಿಗೆ, ಕಡಬದ ಖ್ಯಾತ ವೈದ್ಯ ಡಾ. ಸಿ.ಕೆ. ಶಾಸ್ತ್ರಿ, ದಿ. ಸದಾಶಿವ ಆಚಾರ್ಯ ಅವರ ಸ್ಮರಣಾರ್ಥ ಸರೋಜಿನಿ ಎಸ್. ಆಚಾರ್ಯ, ಗೋಪಾಲ ಶೆಟ್ಟಿ ಕಳಾರ, ಭಜನಾ ಸೇವೆಗೆ ಪರಮೇಶ್ವರ ಆಚಾರಿ ನೆಟ್ಟಣ ಅವರನ್ನು ಸ್ವಾಮಿಜಿಯವರು ಗೌರವಿಸಿದರು.
ಡಿ.24ರಂದು ಮಧ್ಯಾಹ್ನ ಶ್ರೀ ಕಂಠಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವರಿಗೆ ವಿಶೇಷ ಮಹಾಪೂಜೆ, ಸಂಜೆ ಕಲಶ ಪ್ರತಿಷ್ಠೆಗೊಂಡು ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ ಬಳಿಕ ಕಡಬ ಪೋಲಿಸ್ ಉಪ ನಿರೀಕ್ಷಕ ರುಕ್ಮ ನಾಯಕ್ ಅವರಿಂದ ವೇದಿಕೆಯಲ್ಲಿ ದೀಪ ಪ್ರಜ್ವಲನ ಬಳಿಕ ಶ್ರೀ ಸತ್ಯನಾರಾಯಣ ದೇವರಿಗೆ ಮಹಾಪೂಜೆ, ರಾತ್ರಿ ಶ್ರೀ ದುರ್ಗಾಂಬಿಕಾ ಅಮ್ಮನವರಿಗೆ ಮಹಾಪೂಜೆ ರಾತ್ರಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಲಹರಿ ತಂಡದ ಕುಸಲ್ದ ಕಲಾವಿದರು ಮಂಗಳೂರು ಇವರು ಅಭಿನಯಿಸುವ ಲ| ಕಿಶೋರ್ ಡಿ.ಶೆಟ್ಟಿ ನಿರ್ದೇಶನದ ತುಳು ಹಾಸ್ಯಮಯ ನಾಟಕ ಪುದರ್ ಬೊಡ್ಚಿ, ಊರು ಬೊಡ್ಚಿ ಪ್ರದರ್ಶನ ನಡೆಯಿತು.

error: Content is protected !!

Join the Group

Join WhatsApp Group