ಕುಂದಾಪುರ: ಕೊಡಿ ಹಬ್ಬಕ್ಕೆ ಬಂದ ಯುವಕ ಸಮುದ್ರಪಾಲು

ಕುಂದಾಪುರ, ಡಿ. 12: ಕೋಟೇಶ್ವರ ಕೊಡಿ ಹಬ್ಬಕ್ಕೆಂದು ಬಂದಿದ್ದ ನಾಲ್ಕು ಜನ ಸ್ನೇಹಿತರು ಸ್ನಾನಕ್ಕೆಂದು ಈಜಲು ಹೋದ ಸಂದರ್ಭದಲ್ಲಿ ಓರ್ವ ಸಮುದ್ರ ಪಾಲಾದ ಘಟನೆ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಗಂಗೆಬೈಲು ರಾಮಮಂದಿರದ ಸಮೀಪ ನಡೆದಿದೆ.

ಸಮುದ್ರಪಾಲಾದ ಯುವಕನನ್ನು ತುಮಕೂರಿನ ಅಶೋಕ ನಗರದ ನಿವಾಸಿ ಅನಂತಕುಮಾರ್ ಎಂಬುವರ ಪುತ್ರ ನಿರಂಜನ್(17) ಎಂದು ಗುರುತಿಸಲಾಗಿದೆ. ಕೊಡೇರಿ ನಿವಾಸಿ ಅಪ್ರಮೇಯ ಎಂಬಾತ ತುಮಕೂರಿನಲ್ಲಿ ಬಿಕಾಂ ಓದುತ್ತಿದ್ದ ಎನ್ನಲಾಗಿದ್ದು, ಈತನ ಸಹಪಾಠಿಗಳಾದ ನಿರಂಜನ್, ಫಣಿದತ್ತ, ಸುದೀಪ್, ದೀಕ್ಷಿತ್ ಎಂಬುವವರು ಗುರುವಾರ ಕೋಟೇಶ್ವರ ಕೊಡಿ ಹಬ್ಬ ಇರುವುದರಿಂದ ಅಪ್ರಮೇಯನ ಅಜ್ಜಿ ಮನೆಗೆ ಬೈಕಿನಲ್ಲಿ ಬಂದಿದ್ದರು ಎನ್ನಲಾಗಿದೆ.

ಬುಧವಾರ ಬೆಳಿಗ್ಗೆ ಮನೆ ಸಮೀಪದ ಸಮುದ್ರಕ್ಕೆ ಸ್ನೇಹಿತರು ಈಜಾಡಲು ಹೋಗಿದ್ದಾರೆ. ಸುಮಾರು 11.45ರ ಸುಮಾರಿಗೆ ನಾಲ್ವರು ನೀರು ಪಾಲಾಗಿದ್ದು, ನಿರಂಜನ್ ತೀರಕ್ಕೆ ಬರಲಾರದೇ ಸಾವನ್ನಪ್ಪಿದ್ದಾನೆ. ಉಳಿದವರು ಪಾರಾಗಿದ್ದಾರೆ. ನಿರಂಜನ್ ಮೃತ ದೇಹವನ್ನು ಬೈಂದೂರು ಸರ್ಕಾರೀ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group