ಹೆಣ್ಣಿನ ಬೆಳವಣಿಗೆಗೆ ಅಡ್ಡಿಯಾದ ಅತ್ಯಾಚಾರ ಎಂಬ ಆಯುಧ ➤ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು..?

✍? MD ಮುಸ್ತಫಾ ಮರ್ಧಾಳ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಡಿ.05. ಶೇಖರ್ ಮಧ್ಯಮ ವರ್ಗಕ್ಕೆ ಸೇರಿದ ರೈತ. ಹಳ್ಳಿಯಲ್ಲಿ ಜೀವಿಸುತ್ತಿದ್ದ ಆತನಿಗೆ ಹೆಚ್ಚು ಆಸ್ತಿಯೇನೂ ಅಲ್ಲದಿದ್ದರೂ ಜೀವಿಸಲು ಬೇಕಾದ ಎಲ್ಲಾ ಸೌಕರ್ಯಗಳಿತ್ತು. ಪತ್ನಿ ಮತ್ತು ಮಗಳನ್ನು ಹೊಂದಿರುವ ಆತನ ಬದುಕು ಸುಖಿ ಸಂಸಾರವಾಗಿತ್ತು. ಮಗಳು ಸುಮ ವಿಧ್ಯಾಭ್ಯಾಸದಲ್ಲಿ ಮತ್ತು ಇತರ ಚಟುವಟಿಕೆಯಲ್ಲಿ ಮುಂದೆ ಇದ್ದು SSLC ಯಲ್ಲಿ ಉತ್ತಮ ಅಂಕದೊಂದಿಗೆ ತೆರ್ಗಡೆಯಾಗುತ್ತಾಳೆ. ಮುಂದೆ ಜಿಲ್ಲಾಧಿಕಾರಿ ಆಗಬೇಕೆಂಬ ಆಸೆ ಇದ್ದ ಸುಮಾಳಿಗೆ IAS ಪರೀಕ್ಷೆ ಬರೆಯಬೇಕೆಂಬ ಛಲವಿತ್ತು.


ಈಗಾಗಲೇ SSLC ಪೂರ್ತಿಗೊಳಿಸಿದ ಸುಮಾ ಮುಂದಿನ ವಿದ್ಯಾಭ್ಯಾಸಕ್ಕಾಗಿ 5 ಕಿಲೋ ಮೀಟರ್ ದೂರದ ಕಾಲೇಜಿಗೆ ತಂದೆ-ತಾಯಿಯ ಸಂಪೂರ್ಣ ಸಹಕಾರ ಮತ್ತು ಬೆಂಬಲದೊಂದಿಗೆ ಹೋಗುತ್ತಾಳೆ. ಕಾಲೇಜಿನಲ್ಲಿ ಎಲ್ಲಾ ಚಟುವಟಿಕೆಯಲ್ಲಿ ಮಂದೆ ಇದ್ದ ಸುಮಾ ತಂದೆ-ತಾಯಿಯ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತಾಳೆ. ಹೀಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ ಶೇಖರ್ ಕುಟುಂಬಕ್ಕೆ ಕಷ್ಟಕಾಲ ಆರಂಭವಾದದ್ದು ಆ ಒಂದು ವಾರ್ತೆಯಿಂದ. ಪ್ರತೀ ದಿವಸದಂತೆ ಆ ದಿವಸವು ಪತ್ರಿಕೆಯನ್ನು ನೊಡಿದಾಗ ಶೇಖರ್ ಗೆ ಕಂಡದ್ದು ದೆಹಲಿಯಲ್ಲಿ ಬಸ್ಸಿನಲ್ಲಿ ನಡೆದ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರದ ಸುದ್ದಿ. ದೆಹಲಿಯೆಂಬ ಮಹಾನಗರದಲ್ಲಿಯೇ ಒಬ್ಬಳು ಹೆಣ್ಣು ಮಗುವಿಗೆ ರಕ್ಷಣೆ ಇಲ್ಲವಾದರೆ ಇಂತಹ ಚಿಕ್ಕ ಹಳ್ಳಿಯಲ್ಲಿ ಬದುಕುತ್ತಿರುವ ನಮ್ಮ ಹೆಣ್ಣು ಮಗಳ ಅವಸ್ಥೆ ಏನಾಗಬಹುದು ಎಂಬ ಭಯ ಹುಟ್ಟಿಕೊಂಡಿತು.

ಸುಮಾಳನ್ನು ಸಾಧನೆಗಳ ಮೆಟ್ಟಿಲು ಏರಲಿ ಎಂದು ಬಿಟ್ಟಿದ್ದ ತಂದೆ-ತಾಯಿಯರು ಇಂದಿನಿಂದ ಭಯದ ಕಾರಣದಿಂದ ಹಿಂಜರಿಯಲು ಆರಂಭಿಸುತ್ತಾರೆ. ಹೇಗೆ ಈಜಲು ಕಲಿಯಬೇಕಾದರೆ ನೀರಿಗಿಳಿಯಬೇಕೋ..? ಹಾಗೆಯೇ ಸಮಾಜದ ಬಗ್ಗೆ ತಿಳಿಯಬೇಕಾದರೆ ಸ್ವತಂತ್ರವಾಗಿ ಬಿಡಬೇಕು ಎಂದುಕೊಂಡಿದ್ದ ತಂದೆ ತಾಯಿ ಮಗಳಿಗೆ ಏನಾಗಬಹುದೆಂಬ ಭಯದಿಂದ ಬಂಧನದಲ್ಲಿ ಇರಿಸುತ್ತಾರೆ. ಮಗಳು ಹೊರಗಡೆ ಹೋಗಬೇಕು ಎಂದುಕೊಂಡಾಗ ಆಕೆಯ ಬಳಿ ನೂರಾರು ಪ್ರಶ್ನೆಗಳನ್ನು ಕೇಳಿ ಬಿಡುತ್ತಿದ್ದರು.


ಇದೆನ್ನೆಲ್ಲಾ ಮನಗಂಡ ಆಕೆ ನಿಧಾನವಾಗಿ ಬಂಧನದಲ್ಲಿರುವ ಹಕ್ಕಿಯಂತಾಗುತ್ತಾಳೆ. ಮನೆಯಲ್ಲಿ ಕುಳಿತು ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸುತ್ತಾಳೆಯೇ ಹೊರತು ಅದನ್ನು ಯಾವ ರೀತಿ ಸಮಾಜಕ್ಕೆ ಅನ್ವಯಿಸಬೇಕು ಎಂಬ ವಿಮರ್ಶಾತ್ಮಕ ಚಿಂತನೆಯನ್ನು ಕಳೆದುಕೊಳ್ಳುತ್ತಾಳೆ. IAS ಆಗಬೇಕೆಂಬ ಆಸೆಯಿದ್ದರೂ ಅದನ್ನು ಯಾವ ರೀತಿ ಸಾಧಿಸಬೇಕು ಎಂಬ ಮಾಹಿತಿ ಇಲ್ಲದೇ ಜೀವನ ಸಾಗಿಸುತ್ತಾಳೆ. ಅವಳಿಗೆ ಕೊನೆಗೆ ವಿವಾಹವಾಗಿ ಗಂಡನ ಸೇವೆಯೇ ಅತೀ ದೊಡ್ಡ ಕೆಲಸವೆಂದು ಮುಂದೆ ಆತ ನೀಡುವ ಬಂಧನದ ಜೀವನವನ್ನು ಒಪ್ಪಿಕೊಂಡು ಬದುಕುತ್ತಾಳೆ.

 

ಇದು ಕೇವಲ ಸುಮಾಳ ಕಥೆಯಲ್ಲ. ಪ್ರತೀಯೊಬ್ಬ ಭಾರತೀಯ ಸಹೋದರಿಯ ಕಥೆ. ದೊಡ್ಡ ದೊಡ್ಡ ಸಾಧನೆ ಮಾಡಿದ ಸಾಧಕರ ಪಟ್ಟಿಯಲ್ಲಿ ಮಹಿಳೆಯರ ಹೆಸರು ವಿರಳಗೊಳ್ಳಲು ಆಕೆಯ ದುರ್ಬಲತೆ ಕಾರಣ ಎಂದುಕೊಂಡಿದ್ದೀರಾ..? ಹಾಗಿದ್ದರೇ ಅದು ನಿಮ್ಮ ತಪ್ಪು !! ಯಾಕೆಂದರೆ ಕೆಲವೊಂದು ಸಂಶೋಧನೆಗಳ ಪ್ರಕಾರ ಮಹಿಳೆಯರ ಹಿಂದುಳಿದಿರುವಿಕೆಗೆ ಆಕೆಯ ಮೇಲಿನ ಅತಿಯಾದ ನಿರ್ಬಂಧ ಕಾರಣ ಎಂದು ತಿಳಿದುಬಂದಿದೆ. ಹೇಗೆಂದರೆ, ಸಾಧನೆ ಮಾಡಲು ಹೇಗೆ ಬುದ್ದಿ ಮತ್ತು ಶಕ್ತಿಯ ಅವಶ್ಯಕತೆ ಇದೆಯೊ ಅದೇ ರೀತಿ ಬುದ್ದಿ ಮತ್ತು ಶಕ್ತಿಯನ್ನು ಪ್ರಯೋಗಿಸುವ ಸ್ವಾತಂತ್ರ್ಯ ಅವಶ್ಯವಾಗಿದೆ. ಉದಾಹರಣೆಗೆ ಅಬ್ದುಲ್ ಕಲಾಂರನ್ನು ಸಣ್ಣ ಪ್ರಾಯದಲ್ಲಿರುವಾಗ ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಹೋಗಲು ಬಿಡದೆ ಅವರ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿದ್ದರೆ ಅವರಂತಹ ವಿಜ್ಞಾನಿಗಳು ಭಾರತಕ್ಕೆ ನಷ್ಟವಾಗುತ್ತಿರಲಿಲ್ಲವೇ???
ಹೌದು ಅದೇ ರೀತಿ ನಾವು ಎಷ್ಟು ಮಹಿಳೆಯರನ್ನು ಸಂರಕ್ಷಣೆಯೆಂಬ ಬೇಲಿಯನ್ನು ಹಾಕಿ ಸಂಭಾವ್ಯ ಬಲಿಪಶುಗಳಾನ್ನಗಿಸಿದ್ದೇವೆ. ಸಂರಕ್ಷಣೆಯೆಂಬ ಬೇಲಿ ಹಾಕಲು ಇರುವ ಬಹುಮುಖ್ಯ ಕಾರಣ ಆಕೆಯ ಮೇಲೆ ಲೈಗಿಂಕ ದೌರ್ಜನ್ಯವಾಗಬಹುದೆಂಬ ಭಯವೇ ಆಗಿದೆ.


ಮಹಿಳಾ ಸಬಲೀಕರಣವೆಂದರೆ ಮಹಿಳೆಯರನ್ನು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರುವಂತೆ ಮಾಡಿ ಇತಿಹಾಸದುದ್ದಕ್ಕೂ ಸಂಭಾವ್ಯ ಬಲಿಪಶು (potential victim) ಆಗಿದ್ದ ಆಕೆಯನ್ನು ಪಿತ್ರಪ್ರಭುತ್ವ (Patriarch) ಎಂಬ ಶತಮಾನಗಳು ಗುಲಾಮಗಿರಿಯ ಸಂಕೋಲೆಯನ್ನು ಹೊಡೆದು ಹಾಕಲು ಬಲವನ್ನು ನೀಡುವುದಾಗಿದೆ. ಮಹಿಳಾ ಸಬಲೀಕರಣ ಎಂಬುವುದು ನಾಗರಿಕ ಸಮಾಜದ ಸ್ಪಷ್ಟ ಕರ್ತವ್ಯವಾಗಿದೆ.


ಪ್ರೀತಿಯ ಸಹೋದರಿಯರೇ ಅಪರಾಧಿಯೊಬ್ಬರನ್ನು ಗಲ್ಲಿಗೇರಿಸಿದ ಅಥವಾ ಮರಣದಂಡನೆ ವಿಧಿಸಿದ ಮಾತ್ರಕ್ಕೆ ಅವಳ ಮೇಲಿನ ದೌರ್ಜನ್ಯವು ಕಡಿಮೆಯಾಗುವುದಾದರೆ ಅತೀ ಕಠಿಣ ಶಿಕ್ಷೆಯನ್ನು ನೀಡಲಾಗುತ್ತಿದ್ದ ಮಧ್ಯಯುಗದ ಕಾಲದಲ್ಲಿ ಯಾವುದೇ ಅಪರಾಧಗಳು ಇರಬಾರದಿತ್ತು. ನಾವು ಎಚ್ಚೆತ್ತುಕೊಳ್ಳಬೇಕಾಗಿದ್ದು, ಮಹಿಳೆಯರ ಮೇಲಿನ ದೌರ್ಜನ್ಯವು ಕೇವಲ ಗಲ್ಲಿನೊಂದಿಗೆ ಕೊನೆಗೊಲ್ಲುವುದಿಲ್ಲ. ಮಹಿಳೆಯರು ಪುರುಷರಿಗೆ ಸಮಾನರು ಎಂದು ಸಾಬೀತುಪಡಿಸುತ್ತಿರುವ ಈ ಯುಗದಲ್ಲಿ, ಅತ್ಯಾಚಾರವೆಂಬ ಆಯುಧವನ್ನು ಕೆಲವು ಕೇಡಿಗಳು ನಿಮ್ಮ ಬೆಳವಣಿಗೆ ತಡೆಯಲು ಬಳಸುತ್ತಿರುವಾಗ ಮಲಗಿ ನಿದ್ದೆ ಮಾಡಬೇಡಿ ಜಾಗೃತಿ ಮೂಡಿಸಿ.

ನಾವು ಉಪಯೋಗಿಸಲು ಮಹಿಳೆ ಕೇವಲ ಭೋಗದ ವಸ್ತುವಲ್ಲ. ಆಕೆ ಓಬ್ಬಳು ಸಹೋದರಿ, ಆಕೆ ನಮ್ಮಂತಹ ಮತ್ತೊಬ್ಬರ ತಂಗಿ, ತಾಯಿ, ಅಥವಾ ಮಗಳಾಗಿದ್ದಾಳೆ. ನಮ್ಮ ಹಾಗೆ ಸಾವಿರ ಕನಸನ್ನು ಕಟ್ಟಿಕೊಂಡಿರುವ ಜೀವವೇ ಆಗಿದೆ, ಅತ್ಯಾಚಾರಿಗಳಿಗೆ ವಿರುದ್ಧ ಧ್ವನಿಯೆತ್ತದೆ ನಾವು ಸುಮ್ಮನಾದರೆ ಮಹಿಳಾ ಸಬಲೀಕರಣವೆಂಬುವುದು ಕೇವಲ ಕನಸಾಗಿ ಉಳಿಯ ಬಹುದು.

✍? MD ಮುಸ್ತಫಾ ಮರ್ಧಾಳ

error: Content is protected !!

Join the Group

Join WhatsApp Group