ಪಿಕಪ್ ನಲ್ಲಿ ದನವನ್ನು ಕಡಬ ಪೊಲೀಸ್ ಠಾಣೆಗೆ ತಂದ ಚಾಲಕ ➤ ಯಾಕೆಂದು ಗೊತ್ತೇ..?

(ನ್ಯೂಸ್ ಕಡಬ) newskadaba.com ಕಡಬ, ನ.19. ದನ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದು ಕೋಡಿಂಬಾಳದಿಂದ ಕಡಬದವರೆಗೆ ಅತೀ ವೇಗದಲ್ಲಿ ಅಪಾಯಕಾರಿಯಾಗಿ ಚಲಿಸಿದ್ದು, ಈ ಸಂದರ್ಭದಲ್ಲಿ ಹಲವಾರು ಪಾದಚಾರಿಗಳು ಕೆಲವೇ ಅಂತರದಿಂದ ಅಪಾಯದಿಂದ ಪಾರಾದ ಘಟನೆ ಮಂಗಳವಾರದಂದು ನಡೆದಿದೆ.

ಅದೃಷ್ಟವಶಾತ್ ರಸ್ತೆಯಲ್ಲಿ ಕಡಿಮೆ ಜನಸಂಖ್ಯೆ ಇದ್ದುದರಿಂದ ಸಂಭಾವ್ಯ ಅಪಾಯಗಳು ತಪ್ಪಿದೆ. ನೆಲ್ಯಾಡಿ, ಇಚ್ಲಂಪಾಡಿ ಭಾಗದಿಂದ ಪಿಕಪ್ ವಾಹನದಲ್ಲಿ ದನಗಳನ್ನು ಮುಳ್ಳೇರಿಯಕ್ಕೆ ಸಾಗಿಸಲಾಗುತ್ತಿತ್ತು. ಈ ವಾಹನದಲ್ಲಿ ಅಕ್ರಮ ದನ ಸಾಗಾಟ ಮಾಡಲಾಗುತ್ತಿದೆ ಎಂಬ ಗುಮಾನಿಯಲ್ಲಿ ಬೆಳ್ಳಾರೆ ಠಾಣಾ ವ್ಯಾಪ್ತಿಯ ನಿಂತಿಕಲ್ ಭಾಗದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದಿದ್ದಾರೆ ಎನ್ನಲಾಗಿದ್ದು, ಈ ವೇಳೆ ಅವರನ್ನು ಕಂಡು ಪಿಕಪ್ ಚಾಲಕ ತನ್ನ ಪಿಕಪ್ ನ್ನು ಕಡಬ ಕಡೆಗೆ ತಿರುಗಿಸಿ ಕಡಬ ಠಾಣೆಗೆ ಬಂದಿದ್ದ. ಈ ವೇಳೆ ಪ್ರಕರಣ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದುದರಿಂದ ಜಾನುವಾರು ಸಮೇತ ಪಿಕಪನ್ನು ಬೆಳ್ಳಾರೆ ಪೋಲಿಸರಿಗೆ ಹಸ್ತಾಂತರಿಸಿದ್ದಾರೆ.

ಈ ಬಗ್ಗೆ ವಿ.ಹಿಂ.ಪ. ಕಡಬ ಪ್ರಖಂಡದ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಪ್ರತಿಕ್ರಿಯೆ ನೀಡಿ, ಕೆಎ.21.ಎ.3694 ವಾಹನದಲ್ಲಿ ವಾರದಲ್ಲಿ ಮೂರು ನಾಲ್ಕು ಬಾರಿ ಬೆಳಿಗ್ಗಿನ ಜಾವ ದನವನ್ನು ಸಾಗಾಟ ಮಾಡಲಾಗುತ್ತಿದೆ, ಈ ಬಗ್ಗೆ ಕಡಬ ಪೋಲಿಸರಿಗೆ ಮಾಹಿತಿ ಈ ಹಿಂದೆಯೇ ನೀಡಿದ್ದೆವೆ. ಇಂದು ಬೆಳಿಗ್ಗೆ ದನ ಸಾಗಾಟ ಮಾಡಲಾಗಿದೆ, ಮೇಲ್ನೋಟಕ್ಕೆ ಇವರು ದಾಖಲೆಗಳನ್ನು ಸಿದ್ದಪಡಿಸಿಕೊಂಡಿದ್ದರೂ ಇವರು ಸಾಗಾಟ ಮಾಡುತ್ತಿರುವುದು ಕೇರಳದ ಅಕ್ರಮ ಕಸಾಯಿಖಾನೆಗಳಿಗೆ ಇಂತಹ ಸಾಗಾಟ ನಿರಂತರವಾಗಿ ನಡೆಯುತ್ತಿದೆ, ಈ ಬಗ್ಗೆ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಇವರ ಬಗ್ಗೆ ತನಿಖೆ ನಡೆಸಬೇಕು, ಗೋಹತ್ಯೆ ನಿಷೇಧ ಕಾನೂನು ಶೀಘ್ರ ಬರದಿದ್ದರೆ ಕೋಮು ಸಾಮರಸ್ಯಕ್ಕೆ ದಕ್ಕೆ ಬರಬಹುದು ಎಂದು ರಾಧಾಕೃಷ್ಣ ಕೋಲ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group