ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ ► ಪ್ರೇಮ ವೈಫಲ್ಯ ಆತ್ಮಹತ್ಯೆಗೆ ಎಡೆಮಾಡಿತೇ…?

(ನ್ಯೂಸ್ ಕಡಬ) newskadaba.com ವಿಟ್ಲ, ಆ.19. ಆರ್ಥಿಕ ಅಡಚಣೆಯಿಂದ ಮನನೊಂದು ಮನೆಯಿಂದ ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹ ಗುಡ್ಡೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾದ ಘಟನೆ ವಿಟ್ಲ ಮುಡ್ನೂರು ಗ್ರಾಮದ ಕುಕ್ಕುತ್ತಡ್ಕ ಎಂಬಲ್ಲಿ ನಡೆದಿದೆ.

ಕುಂಡಡ್ಕ ಕುಕ್ಕುತ್ತಡ್ಕ ನಿವಾಸಿ ತಿಮ್ಮಪ್ಪ ಪೂಜಾರಿ ಎಂಬವರ ಪುತ್ರ ಗಣೇಶ(27) ಆತ್ಮಹತ್ಯೆಗೆ ಶರಣಾಗಿರುವ ಯುವಕ. ಈತ ಆಗಸ್ಟ್ 14 ರಂದು ತನ್ನ ಸಹೋದರನ ಜತೆ ದಾಸಕೋಡಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆಂದು ತೆರಳಿದ್ದು ಅಲ್ಲಿಂದ ಹಿಂದಿರುಗುವ ವೇಳೆ ಗಣೇಶ ಅರ್ಧದಾರಿಯಲ್ಲಿ ಇಳಿದಿದ್ದ. ಅದಾದ ಬಳಿಕ ಈತ ನಾಪತ್ತೆಯಾಗಿದ್ದು, ಮನೆಯವರು ಎಲ್ಲೆಡೆ ಹುಡುಕಾಡಿದ್ದರು. ಆದರೆ ಇಂದು ಗಣೇಶ್ ಕುಕ್ಕುತ್ತಡ್ಕ ಸಮೀಪದ ಗುಡ್ಡೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶವ ಕೊಳೆತ ಸ್ಥಿತಿಯಲ್ಲಿದ್ದು, ಮೂರು ದಿನ ಹಿಂದೆ ಘಟನೆ ನಡೆದಿದೆ ಎನ್ನಲಾಗಿದೆ. ಈತ ದಿನಪೂರ್ತಿ ಮೊಬೈಲ್ ನಲ್ಲಿ ಮಾತನಾಡುತ್ತಾ ಕಾಲಹರಣ ಮಾಡುತ್ತಿದ್ದು ಕೆಲಸಕ್ಕೆ ಕೂಡ ಹೋಗುತ್ತಿರಲಿಲ್ಲ ಎನ್ನಲಾಗಿದೆ . ಆರ್ಥಿಕ ಅಡಚಣೆ ಹಾಗೂ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸ್ಥಳದಲ್ಲಿ ಮೂರು ಮೊಬೈಲ್ ಪತ್ತೆಯಾಗಿದ್ದು, ಅವನ್ನು ವಶಕ್ಕೆ ಪಡೆದಿರುವ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top