ಬ್ರಹ್ಮಶ್ರೀ ನಾರಾಯಣ ಗುರು ಜನ್ಮ ದಿನಾಚರಣೆ, ಧಾರ್ಮಿಕ ಸಭೆ

(ನ್ಯೂಸ್ ಕಡಬ)newskadaba.com ಅ.21. ಕಡಬ. ತ್ಯಾಗಪೂರ್ಣ ಜೀವನದಿಂದ ಮನುಷ್ಯನ ಬದುಕು ಸಾರ್ಥಕವಾಗಲು ಸಾಧ್ಯ ಎಂದು ಧರ್ಮಸ್ಥಳದ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಬ್ರ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿಯವರ 165ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವ ವಾಹಿನಿ ಕಡಬ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಕಡಬ, ಮರ್ದಾಳ ಮತ್ತು ಆಲಂಕಾರು ವಲಯಗಳ ಸಂಯುಕ್ತ ಆಶ್ರಯದಲ್ಲಿ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಗುರುಪೂಜೆ ಕಾರ್ಯಕ್ರಮದ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಸಾಧಕರಿಗೆ ಸಮ್ಮಾನ ನೆರವೇರಿಸಿ ಆಶೀರ್ವಚನ ನೀಡಿದರು. ನಮ್ಮ ನಡೆ ಮತ್ತು ನುಡಿ ಸ್ವಚ್ಛವಾಗಿರಬೇಕು, ಬದುಕು ಮತ್ತು ಬೋಧನೆಯಿಂದ ಆದರ್ಶರಾದವರು ಮಾತ್ರ ದಾರ್ಶನಿಕರಾಗುತ್ತಾರೆ, ಹಾಗೆಯೇ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಗಳು ಸಮಾಜದ ಶೋಷಿತರು ಮತ್ತು ಹಿಂದುಳಿದವರಿಗಾಗಿ ಬದುಕಿ ಪೂಜನೀಯರಾಗಿದ್ದಾರೆ. ಅವರ ತತ್ವ ಮತ್ತು ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದು ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ  ಜಯಂತ ನಡುಬೈಲು ಅವರು ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಶ್ರೀಗಳು ಸಮಾಜಕ್ಕೆ ಸಮರ್ಥ ಮಾರ್ಗದರ್ಶನ ನೀಡುವ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಮಠದ ಶಾಖೆಗಳನ್ನು ಮಾಡಿಕೊಂಡು ನಾರಾಯಣ ಗುರುಗಳ ಸಂದೇಶವನ್ನು ಪಸರಿಸುವ ಕೆಲಸವನ್ನು ಮಾಡುವುದರೊಂದಿಗೆ ಸಮಾಜದ ಎಲ್ಲಾ ವರ್ಗದ ಸುಮಾರು 400ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದಾರೆ. ಅವರ ಸಮಾಜಮುಖಿ ಪುಣ್ಯ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದರು.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಡಾ|ಗಣೇಶ್ ಅಮೀನ್ ಸಂಕಮಾರ್ ಗುರು ಸಂದೇಶ ನೀಡಿದರು. ಯುವ ವಾಹಿನಿ ಕಡಬ ಘಟಕ ಅಧ್ಯಕ್ಷ  ಬಿ.ಎಲ್.ಜನಾರ್ದನ ಅವರು ಅಧ್ಯಕ್ಷತೆ ವಹಿಸಿದ್ದರು. ಪೋಲೀಸ್ ಇನ್ಸ್‍ಪೆಕ್ಟರ್ ಸುರೇಶ್‍ಕುಮಾರ್ ಕಡಬ ಅವರು ಶುಭಹಾರೈಸಿದರು. ಯುವ ವಾಹಿನಿ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಹೊನ್ನಪ್ಪ ಪೂಜಾರಿ ಕೈಂಬಾಡಿ, ಕಡಬ ಘಟಕದ ಕಾರ್ಯದರ್ಶಿ ಶಿವಪ್ರಸಾದ್ ನೂಚಿಲ, ಉಪಾಧ್ಯಕ್ಷ ರಾಜೇಶ್ ದೋಳ, ಜತೆ ಕಾರ್ಯದರ್ಶಿ ಅಶ್ವಥ್ ಸಾಂತ್ಯ, ನಿರ್ದೇಶಕ ಸುಂದರ ಪೂಜಾರಿ ಪಿಜಕ್ಕಳ, ಬಿಲ್ಲವ ಸಂಘದ ಮರ್ದಾಳ ವಲಯದ ಸಂಚಾಲಕ ಸತೀಶ್ ಕೆ. ಐತ್ತೂರು, ಆಲಂಕಾರು ವಲಯದ ಸಂಚಾಲಕ ಸದಾನಂದ ಕುಮಾರ್ ಮಡ್ಯೊಟ್ಟು, ಕಡಬ ವಲಯದ ಸಂಚಾಲಕ ಲಕ್ಷ್ಮೀಶ ಬಂಗೇರ ಕಡಬ ಮೊದಲಾದವರು ಉಪಸ್ಥಿತರಿದ್ದರು.

 

error: Content is protected !!

Join the Group

Join WhatsApp Group