ಸುಳ್ಯ: ಬಸ್ – ಇನ್ನೋವಾ ಅಪಘಾತದ ಗಾಯಾಳು ಬಾಲಕಿ ಮೃತ್ಯು ➤ ಮೃತರ ಸಂಖ್ಯೆ ಮೂರಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ.12. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಇನ್ನೋವಾ ಕಾರು ನಡುವೆ ಢಿಕ್ಕಿಯುಂಟಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಗಂಭೀರ ಗಾಯಗೊಂಡ ಬಾಲಕಿಯೋರ್ವಳು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯದ ಅಡ್ಕಾರ್ ಸಮೀಪದ ಮಾವಿನಕಟ್ಟೆ ಎಂಬಲ್ಲಿ ಶುಕ್ರವಾರ ಸಾಯಂಕಾಲ ಸಂಭವಿಸಿದೆ.

ಮೃತರನ್ನು ಪುತ್ತೂರು ಸಮೀಪದ ಕಬಕ ವಿದ್ಯಾಪುರ ನಿವಾಸಿ ಮಜೀದ್ ಎಂ., ಕಬಕ ನಿವಾಸಿ ಮಹಮ್ಮದ್ ಸಾದಿಕ್ ಹಾಗೂ ಸುನೈನಾ(16) ಎಂದು ಗುರುತಿಸಲಾಗಿದೆ. ಸುಳ್ಯದಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಹಾಗೂ ವಿರುದ್ಧ ದಿಕ್ಕಿನಿಂದ ಆಗಮಿಸಿದ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಸಲ್ಮಾನ್ ಫಾರಿಸ್ (10), ಅಬೂಬಕ್ಕರ್(40) ಹಾಗೂ ಮಹಮ್ಮದ್(14) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಜೀದ್ ರವರ ವಿವಾಹವು ಪುತ್ತೂರಿನ ಯುವತಿಯೊಂದಿಗೆ ಅಕ್ಟೋಬರ್ 20 ಕ್ಕೆ ನಡೆಯುವುದಾಗಿ ನಿಶ್ಚಯಿಸಲಾಗಿದ್ದು, ಸಾದಿಕ್ ರವರ ವಿವಾಹವು ನವೆಂಬರ್ 03 ರಂದು ನಡೆಯುವುದಿತ್ತು. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!

Join the Group

Join WhatsApp Group