ಕೊಂಬಾರು: ಯುವಕನಿಗೆ ಹಲ್ಲೆ ನಡೆಸಿದ ಅರಣ್ಯಾಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಗ್ರಹ ➤ ಇಂದು ಸುಬ್ರಹ್ಮಣ್ಯದಲ್ಲಿ ನಡೆಯುವ ಪ್ರತಿಭಟನೆಗೆ ಕಡಬ ಗೌಡ ಸಮುದಾಯದ ಬೆಂಬಲ

(ನ್ಯೂಸ್ ಕಡಬ) newskadaba.com ಕಡಬ, ಸೆ.30. ಕೊಂಬಾರು ಗ್ರಾಮದ ಕಾಪಾರು ರಾಮಣ್ಣ ಗೌಡರ ಪುತ್ರ ಕೂಲಿ ಕಾರ್ಮಿಕ ಲೋಕೇಶ್ ಕಾಪಾರು ಎಂಬವರ ಮೇಲೆ ಸುಬ್ರಹ್ಮಣ್ಯ ಅರಣ್ಯ ವಲಯದ ಬಿಳಿನೆಲೆ ಮೀಸಲು ಅರಣ್ಯ ರಕ್ಷಕ ಅಶೋಕ್ ಹಾಗೂ ಇತರ ಸಿಬಂದಿಗಳು ನಡೆಸಿದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥ ಅರಣ್ಯಾಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಇಂದು ನಡೆಯುವ ಪ್ರತಿಭಟನೆಗೆ ಕಡಬ ಗೌಡ ಸಮುದಾಯದ ಬೆಂಬಲ ಇದೆ ಎಂದು ಗೌಡ ಸಮುದಾಯದ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕಡಬ ಒಕ್ಕಲಿಗ ಗೌಡ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು ಮಾತನಾಡಿ, ಭಾಗಿಮಲೆಯಲ್ಲಿ ನಡೆದ ಮರ ಕಳ್ಳತನಕ್ಕೆ ಸಂಬಂಧಿಸಿ ಅಮಾಯಕ ಯುವಕ ಲೋಕೇಶ್ ಎಂಬವರನ್ನು ಸೆ.12ರಂದು ಕೆಂಜಾಳ ರೈಲ್ವೇ ಬಿಡ್ಜ್ ಬಳಿಯಿಂದ ಉಪಾಯದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕರೆದುಕೊಂಡು ಹೋಗಿ ಅರಣ್ಯ ಇಲಾಖೆಗೆ ಸೇರಿದ ಕೊಲ್ಲಮೊಗ್ರು ಅರಣ್ಯ ವಸತಿ ಗೃಹದಲ್ಲಿ ಕೂಡಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಕೈ ಕಾಲು ಕಟ್ಟಿ ಕಳವು ಆಗಿರುವ ಮರವನ್ನು ಲೋಕೇಶ್ ಕಳವು ಮಾಡಿದ್ದೆಂದು ಬಲವಂತವಾಗಿ ಒಪ್ಪಿಸಿ ಬೆದರಿಸಿ ಹಲ್ಲೆ ಮಾಡಿದ್ದಾರೆ. ಇದರಿಂದ ಲೋಕೇಶ್ ಅವರಿಗೆ ಹೊಟ್ಟೆಯ ಭಾಗಕ್ಕೆ ತೀವ್ರ ಗಾಯವಾಗಿದ್ದು ಅದರಿಂದ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಅಮಾನವೀಯವಾಗಿ ವರ್ತಿಸಿದ ಅರಣ್ಯ ಇಲಾಖಾಧಿಕಾರಿಗಳ ದುರ್ವವರ್ತನೆಯನ್ನು ಖಂಡಿಸಿ ಕೊಂಬಾರು ಗ್ರಾಮದ ಗ್ರಾಮಸ್ಥರು ಈಗಾಗಲೇ ಪ್ರತಿಭಟನೆ ನಡೆಸಿದ್ದು, ಸೆ.30ರಂದು ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಗೆ ಕಡಬ ಗೌಡ ಸಮುದಾಯದ ಸಂಪೂರ್ಣ ಬೆಂಬಲ ಇದೆ ಎಂದು ಕೋಡಿಬೈಲು ಚಂದ್ರಶೇಖರ ಗೌಡ ಹೇಳಿದರು.

Also Read  ಕಡಬ: ಇಚಿಲಂಪಾಡಿ ದೇವಸ್ಥಾನಕ್ಕೆ ಎಸ್. ಅಂಗಾರ ಭೇಟಿ

ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗ ಗೌಡ ಸಂಘದ ಜಿಲ್ಲಾ ಸಮಿತಿಯ ಸದಸ್ಯ ಶಿವರಾಮ ಗೌಡ ಎಂ.ಎಸ್., ಕಡಬ ಯುವ ಒಕ್ಕಲಿಗ ಗೌಡ ಸಂಘದ ಗೌರವಾಧ್ಯಕ್ಷ ಗಣೇಶ್ ಗೌಡ ಕೈಕುರೆ, ಮಾಜಿ ಉಪಾಧ್ಯಕ್ಷ ಮನಮೋಹನ ಗೌಡ ಗೋಳ್ಯಾಡಿ, ಕೊಂಬಾರು ಗ್ರಾಮ ಸಮಿತಿಯ ಕಾರ್‍ಯದರ್ಶಿ ರಾಮಕೃಷ್ಣ ಹೊಳ್ಳಾರು, ಹಲ್ಲೆಗೊಳಗಾದ ಲೋಕೇಶ್ ಅವರ ಸಹೋದರ ಅಶೋಕ್ ರವರು ಉಪಸ್ಥಿತರಿದ್ದರು.

Also Read  ಪಂಜ: ವರ್ಷಾವಧಿ ಜಾತ್ರೋತ್ಸವ ಹಸಿರು ಕಾಣಿಕೆ ಮೆರವಣಿಗೆಯ ಮೂಲಕ ಸಮಾಪ್ತಿ

error: Content is protected !!
Scroll to Top