ಶಿರಾಡಿ ಘಾಟ್ ನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಗುಡ್ಡ ಕುಸಿತ ➤ ಆಗಸ್ಟ್ 12ರ ವರೆಗೆ ವಾಹನ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.10. ಶಿರಾಡಿ ಘಾಟ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಗುಡ್ಡಕುಸಿತದ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿರುವುದರಿಂದ ಆ.12ರವರೆಗೆ ಷರತ್ತು ಬದ್ಧವಾಗಿ ಎಲ್ಲ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನಿಷೇಧಿಸಿ ಆದೇಶಿಸಿದ್ದಾರೆ.

ಶಿರಾಡಿ ಘಾಟ್ ನಲ್ಲಿ ಮಳೆಯ ಆರ್ಭಟ ಶುಕ್ರವಾರ ಮುಂದುವರಿದಿದೆ. ಅಲ್ಲದೆ ಹಲವೆಡೆ ಗುಡ್ಡ ಕುಸಿತದ ಜಾಗದಲ್ಲಿ ಪದೇಪದೇ ವಾಹನ ದಟ್ಟಣೆ ಉಂಟಾಗುತ್ತಿರುವುದರಿಂದ ಮಣ್ಣು ತೆರವು ಕಾರ್ಯಾಚರಣೆ ಕಷ್ಟಸಾಧ್ಯವಾಗಿದ್ದು, ಷರತ್ತಿನ ಮೇರೆಗೆ ಮೂರು ದಿನಗಳ ಕಾಲ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಶುಕ್ರವಾರದಿಂದ ಆ.12 ರವರೆಗೆ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಅಗತ್ಯ ವಸ್ತುಗಳ ಕಾಯ್ದೆ ಅಡಿ ಬರುವ ಸಾಮಗ್ರಿಗಳ ಸಾಗಣೆ ವಾಹನಗಳನ್ನು ಸಾರ್ವಜನಿಕ ಸಾರಿಗೆ ಬಸ್ ಸಂಚಾರ (ಷರತ್ತುಬದ್ಧ) ಹೊರತುಪಡಿಸಿ ಉಳಿದ ಎಲ್ಲ ತರಹದ ವಾಹನಗಳು ಹಾಗೂ ಪ್ರವಾಸಿಗರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಷರತ್ತುಗಳು: ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವ ಸಾಮಗ್ರಿಗಳ ಸಾಗಣೆ ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಉಪಕರಣಗಳು, ಔಷಧಿ, ಆಹಾರ, ಸಾಕಷ್ಟು ಕುಡಿಯುವ ನೀರು ಸಂಗ್ರಹಿಸಿಕೊಳ್ಳುವುದು. ವಾಹನಗಳ ಪರವಾನಿಗೆ ದಾಖಲಾತಿ ಹಾಗೂ ವಾಹನದಲ್ಲಿರುವ ಅಗತ್ಯ ವಸ್ತುಗಳು ಹೊಂದಿರುವ ಬಗ್ಗೆ ದಾಖಲಾತಿಗಳನ್ನು ಕಡ್ಡಾಯವಾಗಿ ತಪಾಸಣಾ ಅಧಿಕಾರಿಗಳಿಗೆ ಹಾಜರುಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group