ಡೆಂಗ್ಯು : ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಲು ಸಂಘ ಸಂಸ್ಥೆಗಳಿಗೆ ಕರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ಮನೆ ಮನೆ ಭೇಟಿ ನೀಡಿ ಮಂಗಳೂರು ನಗರದ ಸುತ್ತಮುತ್ತ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಾರಣ ಆಗುವ ಯಾವುದೇ ರೀತಿಯ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ, ಸಂಪೂರ್ಣ ಸ್ವಚ್ಛತಗೊಳಿಸಲು ಅಭಿಯಾನ ನಡೆಸಲು ಎಲ್ಲಾ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ನಗರಪಾಲಿಕೆ ಜಂಟಿ ಆಯುಕ್ತರಾದ ಗಾಯತ್ರಿ ನಾಯಕ್ ಹೇಳಿದರು.


ಅವರು ಸೋಮವಾರ ಮಂಗಳೂರು ಮಹಾನಗರಪಾಲಿಕೆ ಸಭಾಂಗಣದಲ್ಲಿ ನಡೆದ ಸಾಂಕ್ರಮಿಕ ರೋಗಗಳ ನಿಯಂತ್ರಣ ಕುರಿತು ಜನಜಾಗೃತಿ ಸರ್ಕಾರೇತರ ಸಂಸ್ಥೆಗಳ (ಎನ್‍ಜಿಓ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಿಮ್ಮ ಮನೆ, ನಿಮ್ಮ ಪರಿಸರ, ನಿಮ್ಮ ಜವಾಬ್ದಾರಿ ಸಾರ್ವಜನಿಕರಿಗೆ ರೋಗನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಮಲೇರಿಯಾ, ಡೆಂಗ್ಯೂ ರೋಗಗಳಿಗೆ ಕಾರಣವಾಗುವ ಯಾವುದೇ ರೀತಿಯ ಅಂಶಗಳು ಸೃಷ್ಠಿಯಾಗದಂತೆ ಹಾಗೂ ಮಳೆ ನೀರು ಹಾಗೂ ಇತರ ತ್ಯಾಜ್ಯಗಳ ನೀರು ನಿಲ್ಲದಂತೆ ಗಮನ ಹರಿಸಬೇಕು ಎಂದು ಅವರು ಸೂಚಿಸಿದರು.

ಜನರು ಡೆಂಗ್ಯೂವಿನ ಲಕ್ಷಣದ ಬಗ್ಗೆ ಮಾಹಿತಿ ಪಡೆದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಮುಖ್ಯ. ಡೆಂಗ್ಯೂ ಜ್ವರವು ವೈರಸ್‍ನಿಂದ ಉಂಟಾಗುವ ಕಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಈಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತದೆ.

ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ. ಡೆಂಗ್ಯೂ ಸಾಮಾನ್ಯ ವೈರಲ್ ಜ್ವರವಾಗಿದ್ದು ಇದರ ಬಗ್ಗೆ ಸಾರ್ವಜನಿಕರು ಭಯಭಿತರಾಗುವ ಅವಶ್ಯಕತೆ ಇಲ್ಲ, ಮಂಗಳೂರು ಪ್ರದೇಶದ ನಾಗರಿಕರೂ ತಮ್ಮ ಮನೆಯ ವಠಾರವನ್ನು ತಾವೇ ಸ್ವಚ್ಚವಾಗಿರಿಸುವುದರಿಂದ ಇಂತಹಾ ರೋಗದಿಂದ 15 ದಿನಗಳೊಳಗೆ ಮುಕ್ತ ಪಡೆಯಬಹುದು. ನಾಗರೀಕರೆಲ್ಲರೂ ಜೊತೆಗೂಡಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವುದರಿಂದ ನಾವೆಲ್ಲರೂ ಭಯಭೀತರಾಗುವ ಅಗತ್ಯವಿಲ್ಲ ಎಂದು ಸಭೆಯಲ್ಲಿ ಉಪಸ್ಥಿರಿದ್ದ ನಗರದ ಖ್ಯಾತ ವೈದ್ಯ ಡಾ ಶ್ರೀನಿವಾಸ್ ಕಕ್ಕಿಲಾಯ ತಿಳಿಸಿದರು. ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group