ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ತ್ವರಿತ ಕ್ರಮಕ್ಕೆ ಸೂಚನೆ ➤ ಎಸ್. ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ಸೂಕ್ತವಾದ ಸಮಿತಿಗಳ ರಚನೆ ಆಗಬೇಕು ಎಂದು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಹೇಳಿದರು.


ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಮಂಗಳಮುಖಿಯರ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಂಗಳಮುಖಿಯರ ಗುಂಪುಗಳನ್ನು ಮಾಡಿ ಅದರಲ್ಲಿ ನಿಪುಣತೆ ಹೊಂದಿದ ವ್ಯಕಿಯನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಬೇಕು. ಗುರುತಿನ ಚೀಟಿಯನ್ನು ಪಡೆಯಲು ಇಚ್ಚಿಸುವವರಿಗೆ ತಾಲೂಕು ಮಟ್ಟದಲ್ಲಿ ವೈದ್ಯಕೀಯ ಪ್ರಕ್ರಿಯೆಯನ್ನು ನಡೆಸಲು ಸಮಿತಿಗಳು ರಚನೆಯಾಗಬೇಕಿದೆ ಮತ್ತು ಗುರುತಿನ ಚೀಟಿ ಪಡೆಯಲು 17ಮಂದಿ ಅಧಿಕಾರಿಗಳ ನೇತೃತ್ವದಲ್ಲಿರುವ ಸಮಿತಿಗಳು ಅಂಕಿ ಅಂಶಗಳನ್ನು ಸಂಗ್ರಹಿಸಬೇಕು.

ಗುರುತಿನ ಚೀಟಿ ಪಡೆಯಲು ಅರ್ಹವಿರುವ ಮಂಗಳಮುಖಿಯರ ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಬೇಕು, ಈ ಎಲ್ಲಾ ಕಾರ್ಯಗಳು ಒಂದು ವಾರದೊಳಗೆ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಎರಡು ವಾರಗಳ ಬಳಿಕ ಜಿಲ್ಲಾ ಮಟ್ಟದ ಸಮಿತಿಗಳು ಮತ್ತು ತಾಲೂಕು ಮಟ್ಟದ ಸಮಿತಿಗಳು, ಸಂಬಂಧಪಟ್ಟ ಇಲಾಖೆಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡು ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಿ, ಈ ಕಾರ್ಯಗಾರದಲ್ಲಿ ಆರ್ಥಿಕ ಸ್ಥಿತಿ ಗತಿ, ಸಮಾನ ಹಕ್ಕು ಮತ್ತು ಇನ್ನಿತರ ವಿಷಯಗಳ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ದಮನಿತ ಮಹಿಳೆಯರ ನಿಸ್ಸಾಹಕತೆಯನ್ನು ಹೋಗಲಾಡಿಸಲು ಮತ್ತು ಅವರ ಜೀವನ ಮಟ್ಟ ಸುಧಾರಿಸಲು ಹೆಚ್ಚಿನ ಒತ್ತು ನೀಡಬೇಕು.

ಅವರಲ್ಲಿ ಪಡಿತರ ಚೀಟಿ, ಗುರುತಿನ ಚೀಟಿಯಂತಹಾ ಅಗತ್ಯ ದಾಖಲೆಗಳು ಲಭ್ಯವಿರುವುದನ್ನು ಖಾತ್ರಿ ಪಡಿಸಬೇಕು ಇಲ್ಲದಿದ್ದ ಪಕ್ಷದಲ್ಲಿ ಅವರಿಗೆ ಅಗತ್ಯವಿರುವ ಮೂಲ ಸೌಕರ್ಯಗಳು ದೊರಕುವಂತೆ ಕ್ರಮವಹಿಸಬೇಕು. ದಮನಿತ ಮಹಿಳೆಯರನ್ನು ತಮ್ಮ ಅಗತ್ಯಗಳಿಗೆ ಬಳಸಿಕೊಳ್ಳುವಂತಹಾ ವ್ಯಕ್ತಿಗಳನ್ನು ಹಾಗೂ ಸ್ಥಳಗಳನ್ನು ಪತ್ತೆ ಹಚ್ಚಿ ಅವರ ಬಗ್ಗೆ ಮಾಹಿತಿ ಕಲೆ ಹಾಕಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ಯಾಮಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ್ ಪೂಜಾರಿ, ಉಸ್ಮಾನ್, ಹಿಂದ್ ಕುಷ್ಟ್ ನಿವಾರಣಾ ಸಮಿತಿಯ ಯೋಜನಾಧಿಕಾರಿ ಹರೀಶ್. ಎ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group