ಜನರ ಸಹಕಾರದಿಂದ ಪ್ಲಾಸ್ಟಿಕ್ ನಿಷೇಧ ಸಾಧ್ಯ

(ನ್ಯೂಸ್ ಕಡಬ) newskadaba.com ನರೇಗಲ್ಲ, ಜೂನ್.29.ಪ್ಲಾಸ್ಟಿಕ್‌ ಬಳಕೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಆಧುನಿಕ ಜೀವನದಲ್ಲಿ ನಮ್ಮ ಜೀವನಾವಶ್ಯಕ ವಸ್ತುಗಳೇ ನಮಗೆ ಮೃತ್ಯುವಾಗಿ ಪರಿಣಮಿಸಿವೆ ಎಂದು ಗಜೇಂದ್ರಗಡ ತಹಶೀಲ್ದಾರ್‌ ಗುರುಸಿದ್ಧಯ್ಯ ಹಿರೇಮಠ ಹೇಳಿದರು.

ಸ್ಥಳೀಯ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ವರ್ತಕರಿಗೆ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್‌ ನಿಷೇಧ ಹಾಗೂ ಸ್ವಚ್ಛತೆ ಅರಿವು ಸಭೆಯಲ್ಲಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಭೂಮಿ ಮಳೆ ನೀರು ಇಂಗಲು ಮತ್ತು ಬೆಳೆ ಬೆಳೆಯಲು ಪ್ಲಾಸ್ಟಿಕ್‌ ಚೀಲಗಳು ಅಡ್ಡಿಪಡಿಸುತ್ತಿವೆ. ಪಟ್ಟಣಗಳಲ್ಲಿ ಅವು ಚರಂಡಿಗಳಲ್ಲಿ ಸೇರಿಕೊಂಡು ಸರಿಯಾಗಿ ಕೊಳಚೆ ಹರಿಯುತ್ತಿಲ್ಲ. ಎಲ್ಲೆಂದರಲ್ಲಿ ಕಸ ಬಿಸಾಕುವ ಬದಲಾಗಿ ನಿಗದಿತ ಸ್ಥಳದಲ್ಲಿ ಹಾಕುವ ಮೂಲಕ ಸ್ವಚ್ಛತೆ ಕಾಪಾಡಬೇಕು.

ಇದರಿಂದ ಸ್ವಚ್ಛ ಪರಿಸರ ಜೊತೆಗೆ ಆರೋಗ್ಯವೂ ಚೆನ್ನಾಗಿ ಇರುತ್ತದೆ. ಈಗಾಗಲೇ ಪಟ್ಟಣ ಪ್ರತಿಯೊಂದು ವಾರ್ಡ್‌ಗಳಲ್ಲಿ ಸ್ವಚ್ಛತೆ ಬಗ್ಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿಷ್ಕಾಳಜಿ ತೋರಿಸಬಾರದು. ಹೀಗೆ ಮಾಡಿದರೆ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಸ್ವಚ್ಛ ಭಾರತ ಅಭಿಯಾನ ಪ್ರಯುಕ್ತ ವರ್ತಕರು ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ತಮ್ಮ ಕಸವನ್ನು ಎಲ್ಲಿಯೂ ಬಿಸಾಕಬಾರದು. ತಮ್ಮ ಮನೆಯಲ್ಲಿ ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಪಪಂದಿಂದ ದಿನಕ್ಕೆ ಎರಡು ಭಾರಿ ಟ್ರ್ಯಾಕ್ಟರ್‌ ಮೂಲಕ ಮನೆಗಳಿಗೆ ನಿಗದಿತ ಸಮಯಕ್ಕೆ ಬಂದು ಕಸವನ್ನು ತೆಗೆದುಕೊಂಡು ಹೋಗುತ್ತದೆ ಎಂದರು.

ಸಭೆಯಲ್ಲಿ ಪಾಲ್ಗೊಂಡ ವರ್ತಕರು ಈ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ನಮ್ಮ ಅಂಗಡಿ ಹೆಸರುಳ್ಳ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ದಾಸ್ತಾನು ಮಾಡಿದ್ದು, ಅವು ಮುಗಿಯವವರೆಗೆ ಅವಕಾಶ ಕಲ್ಪಿಸಬೇಕು. ಇಲ್ಲಿ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಒತ್ತಡ ಹೇರುವುದಕ್ಕಿಂತ ಉತ್ಪಾದನಾ ಹಂತದಲ್ಲಿಯೇ ನಿಯಂತ್ರಿಸುವುದು ಸೂಕ್ತ. ಆ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಿದರೆ ಪ್ಲಾಸ್ಟಿಕ್‌ ನಿಷೇಧ ಸಾಧ್ಯ. ಪಟ್ಟಣದ ಕೆಲವೊಂದು ಚರಂಡಿಗಳು ತುಂಬಿವೆ. ಅವುಗಳನ್ನು ಸ್ವಚ್ಛಗೊಳಿಸಿ ಎಂದರು.

error: Content is protected !!

Join the Group

Join WhatsApp Group