ಇನ್ಮುಂದೆ ಹೊಸ್ಮಠ ನದಿಗೆ ತ್ಯಾಜ್ಯ ಎಸೆಯುವವರಿಗೆ ಕಾದಿದೆ ಕಂಟಕ ➤ ನದಿಯ ಇಕ್ಕೆಲಗಳಲ್ಲೂ ಸಿಸಿಟಿವಿ ಅಳವಡಿಕೆ ➤ ನದಿಯಲ್ಲಿ ವಾಹನ ತೊಳೆಯುವ, ಸ್ನಾನ ಮಾಡುವವರ ಮೇಲೂ ಕಾನೂನು ಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಮೇ.20. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರ ಬಗ್ಗೆ ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಿ ಎಚ್ಚರಿಸುತ್ತಿದ್ದ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಹೊಸ್ಮಠ ನದಿಯ ಇಕ್ಕೆಲಗಳಲ್ಲೂ ಸಿ.ಸಿ.ಟಿವಿ ಅಳವಡಿಸಿದ್ದು, ತ್ಯಾಜ್ಯ ಬಿಸಾಡುವವರನ್ನು ಶಿಕ್ಷೆಗೆ ಗುರಿಪಡಿಸಲು ಮುಂದಾಗಿದೆ.

ಹೊಸ್ಮಠ ನದಿಯ ನೀರನ್ನು ಹಲವರು ಕುಡಿಯಲು, ದಿನಬಳಕೆಗೆ ಉಪಯೋಗಿಸುತ್ತಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಸೇತುವೆಯ ಮೇಲೆ ನಿಂತು ತ್ಯಾಜ್ಯಗಳನ್ನು ನದಿ ನೀರಿಗೆ ಬಿಸಾಡುವುದಲ್ಲದೆ, ಕೆಲವರು ನದಿ ನೀರಿನಲ್ಲಿ ಸ್ನಾನ ಮಾಡುವುದು, ವಾಹನಗಳನ್ನು ತೊಳೆಯುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಮುಂದಾದ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಸಿಸಿ ಕ್ಯಾಮರಾ ಅಳವಡಿಸಿದ್ದು, ಭಾನುವಾರದಂದು ಮಾರುತಿ ಓಮ್ನಿ ಕಾರಿನಲ್ಲಿ ಆಗಮಿಸಿದ ಕೆಲವರು ತ್ಯಾಜ್ಯವನ್ನು ಬಿಸಾಡುತ್ತಿದ್ದ ದೃಶ್ಯವನ್ನು ಸೆರೆಹಿಡಿದು ವಾಹನದ ಸಂಖ್ಯೆಯ ಸಮೇತ ಕಡಬ ಠಾಣೆಗೆ ದೂರು‌ ನೀಡಲಾಗಿದೆ.

ಅಲ್ಲದೆ ಇನ್ಮುಂದೆ ವಾಹನಗಳನ್ನು ನದಿ ನೀರಿನಲ್ಲಿ ತೊಳೆದರೆ, ಸ್ನಾನಕ್ಕಿಳಿದರೆ ಅಥವಾ ತ್ಯಾಜ್ಯವನ್ನು ಎಸೆದರೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

error: Content is protected !!

Join the Group

Join WhatsApp Group