ಕಡಬ: ಅಕ್ರಮ ಮರಳುಗಾರಿಕೆಯ ವರದಿಯ ಹಿನ್ನೆಲೆ ➤ ಖಾಸಗಿ ವಾಹಿನಿ ವರದಿಗಾರನಿಗೆ ಕೊಲೆ ಬೆದರಿಕೆ – ದೂರು ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಮೇ.18. ಕಡಬ ಪರಿಸರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ವರದಿ ಮಾಡಿದ್ದಕ್ಕಾಗಿ ಖಾಸಗಿ ವಾಹಿನಿಯ ವರದಿಗಾರರೋರ್ವರಿಗೆ ಕೊಲೆ ಬೆದರಿಕೆಯೊಡ್ಡಲಾಗುತ್ತಿದ್ದು, ಈ ಬಗ್ಗೆ ಸೂಕ್ತ ಭದ್ರತೆ ಒದಗಿಸುವಂತೆ ಕಡಬ ಠಾಣೆಗೆ ದೂರು ನೀಡಲಾಗಿದೆ.

ಕಹಳೆ ನ್ಯೂಸ್ ಕಡಬ ತಾಲೂಕು ವರದಿಗಾರ ಗಣೇಶ್ ಇಡಾಳ ಈ ಬಗ್ಗೆ ಕಡಬ ಪೊಲೀಸರಿಗೆ ದೂರು ನೀಡಿ, ಈ ಹಿಂದೆ ನಾನು ಹಾಗೂ ನಮ್ಮ ವಾಹಿನಿಯು ಕಡಬ ತಾಲೂಕು ವ್ಯಾಪ್ತಿಯಲ್ಲಿ ಆಗುತ್ತಿದ್ದ ಅಕ್ರಮ ಮರಳುಗಾರಿಕೆ ಹಾಗೂ ಇನ್ನಿತರ ಅಕ್ರಮಗಳ ಕುರಿತು ವರದಿ ಮಾಡಿದ್ದೆವು. ಕಳೆದ ಹಲವಾರು ದಿನಗಳಿಂದ ಕೆಲವು ವ್ಯಕ್ತಿಗಳು ನನ್ನ ಚಲನವಲನವನ್ನು ಗಮಸಿಸುತ್ತಿದ್ದಾರಲ್ಲದೆ ಕಳೆದ ಒಂದು ವಾರದಿಂದ ಕಡಬ, ಆಲಂಕಾರು, ಮರ್ಧಾಳ, ಕಲ್ಲುಗುಡ್ಡೆ, ಇಚಿಲಂಪಾಡಿ ಸೇರಿದಂತೆ ಹಲವು ಕಡೆಗಳಲ್ಲಿ ನನ್ನ ಹಾಗೂ ಇತರ ಮಾಧ್ಯಮ ಪ್ರತಿನಿಧಿಗಳನ್ನು ಅಪಘಾತವೆಸಗಿ ಕೊಲೆ ಮಾಡಲಾಗುವುದು ಎಂಬ ಸುದ್ದಿಯು ಹರಿದಾಡುತ್ತಿದೆ. ನನ್ನ ಜೀವಕ್ಕೆ ಏನಾದರೂ ತೊಂದರೆಯಾದಲ್ಲಿ ಅದಕ್ಕೆ ಕಾರಣ ಕಡಬ ತಾಲ್ಲೂಕು ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವ್ಯಕ್ತಿಗಳಾಗಿರುತ್ತಾರೆ ಹಾಗೂ ಪರಂಗಾಜೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಮರಳುಕೋರರ ಮೇಲೆಯೂ ಸಂಶಯವಿದ್ದು, ಈ ಬಗ್ಗೆ ನನಗೆ ಸೂಕ್ತವಾದ ಭದ್ರತೆ ಒದಗಿಸುವಂತೆ ದೂರು ನೀಡಿದ್ದಾರೆ.

error: Content is protected !!

Join the Group

Join WhatsApp Group