ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸಕಲ ನೆರವು- ರಾಜ್‍ಕುಮಾರ್ ಖತ್ರಿ

( ನ್ಯೂಸ್ ಕಡಬ) newskadaba.com ಮಂಗಳೂರು, ಮೇ.6 ಕರಾವಳಿ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರಿನ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದರೆ ಅಂತಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರೀತಿಯ ನೆರವನ್ನು ನೀಡಲಾಗುವುದು ಎಂದು ಕಂದಾಯ ಇಲಾಖೆ ಮತ್ತು ವಿಪತ್ತು ನಿರ್ವಹಣಾ ವಿಭಾಗದ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ ಹೇಳಿದರು.


ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾದ ನೈಋತ್ಯ ಮುಂಗಾರಿನ ಸನ್ನದ್ಧತೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳ ಅನುಭವದಿಂದಾಗಿ ಈ ಸಾಲಿನಲ್ಲಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಹಾಗೂ ಯೋಜನೆಗಳನ್ನು ರೂಪಿಸಿದ್ದು ಇದಕ್ಕೆಂದೇ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ರೂಪಿಸಿರುವ ಸಾಫ್ಟ್‍ವೇರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಳೆಗಾಲಕ್ಕೂ ಮುನ್ನವೇ ಎನ್ ಡಿ ಆರ್ ಎಫ್ ಪಡೆಯನ್ನು ಜಿಲ್ಲೆಯಲ್ಲಿ ನಿಯೋಜಿಸಲಾಗಿದ್ದು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯೋನ್ಮುಖವಾಗಬೇಕೆಂದು ಸೂಚಿಸಿದರು. ಮಳೆಗಾಲಕ್ಕೆ ಮುನ್ನವೇ ಅಗ್ನಿ ಶಾಮಕ ದಳ ಸಜ್ಜಾಗಿರುವುದನ್ನು ಪರಿಶೀಲಿಸಿದ ಅವರು, ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದರು. ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ಇಂಜಿನಿಯರ್‍ಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆದು ಅವರು ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಸೂಚಿಸುವುದಾಗಿ ಅವರು ಹೇಳಿದರು.

Also Read  ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು..!!

ಸಭೆಯಲ್ಲಿ ಪಾಲ್ಗೊಂಡಿದ್ದ ಗೃಹ ಕಾರ್ಯದರ್ಶಿ ಉಮೇಶ್ ಕುಮಾರ್ ಅವರು, ಮಳೆಗಾಲಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೂಕುಸಿತ ಪ್ರದೇಶಗಳ ಸಮೀಕ್ಷೆ ಮಾಡುವುದರಿಂದ ಭೂಕುಸಿತ ತಡೆಗೆ ಕ್ರಮಕೈಗೊಳ್ಳಬಹುದೆಂದು ಸಲಹೆ ಮಾಡಿದರು. ಅತ್ಯಾಧುನಿಕ ತಂತ್ರಜ್ಞಾನಗಳು ಈಗ ಲಭ್ಯವಿದ್ದು ವಿಕೋಪ ನಿರ್ವಹಣೆಗಿಂತ ತಡೆಗೆ ಆದ್ಯತೆ ನೀಡಿ ಎಂದರು. ಪ್ರಾದೇಶಿಕ ಆಯುಕ್ತರಾದ ಟಿ ಕೆ ಅನಿಲ್ ಕುಮಾರ್ ಅವರು ಮಾತನಾಡಿ, ಪ್ರವಾಹ ಭೀತಿ ಪ್ರದೇಶಗಳ ಜನರಿಗೆ ಸನ್ನದ್ದತೆಯ ಬಗ್ಗೆ ಮಾಹಿತಿ ನೀಡಿ ವಿಕೋಪ ನಿರ್ವಹಿಸಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಜನರಿಗೆ ಮಾಹಿತಿಗಳಿರಲಿ. ನಗರದಲ್ಲಿ ಕೃತಕ ನೆರೆ ತಪ್ಪಿಸಲು ಎಲ್ಲ ಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸಿ ಎಂದು ಸಲಹೆ ಮಾಡಿದರು.

ಹವಾಮಾನ ಇಲಾಖೆಯ ನಿರ್ದೇಶಕರಾದ ಡಾ ಶ್ರೀನಿವಾಸಯ್ಯ, ಮುಂಗಾರು ವೇಳೆ ಕರಾವಳಿಯ ಜನರು ‘ಸಿಡಿಲು ಆಪ್’ ಬಳಸಿಕೊಳ್ಳುವುದರ ಮುಖಾಂತರ ಯಾವ ಪ್ರದೇಶಗಳಲ್ಲಿ ಸಿಡಿಲು ಗುಡುಗು ಸಂಭವಿಸಲಿದೆ ಎಂಬುದನ್ನು ತಿಳಿಯಬಹುದಲ್ಲದೆ, ಮಳೆಯ ಮಾಹಿತಿ, ಹವಾಮಾನ ಮುನ್ಸೂಚನೆಯನ್ನು ಪಡೆಯಬಹುದು ಎಂದರು. ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಮಾತನಾಡಿ, ಜಿಲ್ಲಾಡಳಿತ ಪ್ರಸಕ್ತ ಸಾಲಿನ ಮುಂಗಾರಿಗೆ ಸಮನ್ವಯದಿಂದ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು. ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಅವರು ಈಗಾಗಲೇ ಮುಂಗಾರನ್ನು ಎದುರಿಸಲು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಹಾಗೂ ಮಾನವೀಯವಾಗಿ ಕೈಗೊಳ್ಳಲಾಗಿರುವ ಕ್ರಮಗಳನ್ನು ವಿವರಿಸಿದರು. ಎಸ್ಪಿ ಲಕ್ಷ್ಮೀ ಪ್ರಸಾದ್, ಸಿಇಒ ಡಾ ಸೆಲ್ವಮಣಿ ಆರ್, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

Also Read  ?ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹೋಟೆಲ್ ಸಿಬ್ಬಂದಿಯೋರ್ವರ ಮೃತದೇಹ ಪತ್ತೆ

 

error: Content is protected !!
Scroll to Top