ಹೊಸ್ಮಠ: ನದಿ ತಟದಲ್ಲಿ ಗುಂಡು-ತುಂಡು ಪಾರ್ಟಿ ➤ ಭಾಗವಹಿಸಿದ್ದ ವ್ಯಕ್ತಿ ನಿಗೂಢ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮಾ.16. ಯುವಕರ ತಂಡವೊಂದು ಮದ್ಯ ಸೇವನೆಯ ಪಾರ್ಟಿ ಮಾಡಿದ್ದು, ಈ ತಂಡದಲ್ಲಿದ್ದ ವ್ಯಕ್ತಿಯೋರ್ವರು ನಿಗೂಢವಾಗಿ ನಾಪತ್ತೆಯಾಗಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಠಾಣಾ ವ್ಯಾಪ್ತಿಯ ಕುಟ್ರುಪಾಡಿ ಗ್ರಾಮದ ಉಳಿಪ್ಪು ಕುಮಾರಧಾರ ನದಿ ತಟದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಉಳಿಪ್ಪು ನಿವಾಸಿ ಕುರಿಯನ್ (60ವ.) ಎಂದು ಗುರುತಿಸಲಾಗಿದೆ. ಶುಕ್ರವಾರದಂದು ಸ್ಥಳೀಯ ಯುವಕರು ಎಣ್ಣೆ ಪಾರ್ಟಿ ಮಾಡಿದ್ದರೆನ್ನಲಾಗಿದ್ದು, ಮೃತ ಕುರಿಯನ್ ಅವರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಈ ವಿಚಾರ ಕುರಿಯನ್ ಅವರ ಪತ್ನಿಗೂ ತಿಳಿದಿದ್ದು, ರಾತ್ರಿಯಾದರೂ ಕುರಿಯನ್ ಅವರು ಮನೆಗೆ ಬಾರದೆ ಇರುವುದರಿಂದ ಅವರ ಪತ್ನಿ ಅನ್ನಮ್ಮ ಕುಡಿತದ ಪಾರ್ಟಿಯಲ್ಲಿದ್ದ ಇತರ ಐವರನ್ನು ಸಂಪರ್ಕಿಸಿ ನದಿ ತಟದಲ್ಲಿ ಹುಡುಕಾಡಿದಾಗ ಕುರಿಯನ್ ಅವರ ಮೃತದೇಹ ಕುಮಾರಧಾರ ನದಿ ನೀರಿನಲ್ಲಿ ಪತ್ತೆಯಾಗಿದೆ. ತನ್ನ ಪತಿಯ ಸಾವಿನ ಬಗ್ಗೆ ಅನ್ನಮ್ಮ ಅವರು ಸಂಶಯ ವ್ಯಕ್ತಪಡಿಸಿದ್ದು ಕಡಬ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪೊಲೀಸರು ಪಾರ್ಟಿಯಲ್ಲಿದ್ದ ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದು ಈ ಪ್ರಕರಣವನ್ನು ಸಂಶಯಾಸ್ಪದ ಸಾವು ಎಂದು ದಾಖಲಿಸಿದ್ದಾರೆ. ಮೃದೇಹವನ್ನು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ, ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.

error: Content is protected !!

Join the Group

Join WhatsApp Group