ಕ್ಯಾಂಪಸ್ ಫ್ರಂಟ್ ಉಪ್ಪಿನಂಗಡಿ ವಲಯದ ಸಮಿತಿಯಿಂದ “ಬಜೆಟ್ ವಿರೋಧಿ” ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಫೆ.09.ರಾಜ್ಯದಲ್ಲಿ ಶಿಕ್ಷಣ ಸಚಿವರನ್ನು ನೇಮಿಸದೆ ಬಜೆಟ್ ಮಂಡಿಸಿದ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕ್ಯಾಂಪಸ್ ಫ್ರಂಟ್ ಉಪ್ಪಿನಂಗಡಿ ವಲಯ ಸಮಿತಿ ಉಪ್ಪಿನಂಗಡಿ ಬಸ್ ನಿಲ್ದಾಣದ ಸರ್ಕಲ್ ಬಳಿ ಪ್ರತಿಭಟನೆ ನಡೆಸಿತು.ಈ ವೇಳೆ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ, ಶಿಕ್ಷಣ ಸಚಿವರಾದ ಎನ್. ಮಹೇಶ್ ರವರು ರಾಜೀನಾಮೆ ನೀಡಿ ನಾಲ್ಕು ತಿಂಗಳುಗಳೇ ಕಳೆಯಿತು. ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದರೂ ಶಿಕ್ಷಣ ಇಲಾಖೆಗೆ ಇನ್ನೂ ಸಚಿವರನ್ನು ನೇಮಿಸಿಲ್ಲ. ಇದರ ವಿರುದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೂ ಸಚಿವರನ್ನು ನೇಮಿಸದೆ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗೆ ದ್ರೋಹಬಗೆಯುತ್ತಿದ್ದಾರೆ.

ಅದೇ ರೀತಿ ಸಚಿವರನ್ನು ನೇಮಿಸದೆ ಇದೀಗ ಬಜೆಟ್ ಮಂಡಿಸಿದ್ದು ಖಂಡನೀಯ ಎಂದರು. ರಾಜ್ಯದ ಬಜೆಟ್‌ನಲ್ಲಿ ೨೦% ಶಿಕ್ಷಣಕ್ಕೆ ಕೊಡಬೇಕೆಂದು ಕೊಟ್ಟಾರಿ ಆಯೋಗ ಸುಮಾರು ೫೦ ವರ್ಷಗಳ ಮುಂಚೆಯೇ ಪ್ರಸ್ತಾಪ ಮಾಡಿದೆ. ಆದರೆ ಕಳೆದ ಬಾರಿ ಶಿಕ್ಷಣಕ್ಕೆ ಕೇವಲ ೧೨% ಮಾತ್ರ ಕೊಡಲು ಅವರಿಗೆ ಸಾಧ್ಯವಾಗಿದೆ. ಪದವಿಪೂರ್ವ ಶಿಕ್ಷಣದ ಪರೀಕ್ಷೆ ಸಂದರ್ಭದಲ್ಲಿ ಹಲವು ಗೊಂದಲಗಳು ಆಗಿವೆ. ಅಲ್ಲದೇ ಕಳೆದ ಮೂರು ವರ್ಷಗಳಿಂದ ಪ್ರಶ್ನೆ ಪತ್ರಿಕೆಸೋರಿಕೆಯಾಗುತ್ತಿದೆ. ಆದರೆ ಇದನ್ನೆಲ್ಲಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ತಾಲೂಕು ಕಾರ್ಯದರ್ಶಿ ಸಮದ್ ಪೆರ್ನೆ ಅಣಕು ಪ್ರದರ್ಶನಗೈದರು. ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ನೌಫಲ್ ಮತ್ತು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪುತ್ತೂರು ತಾಲೂಕು ಕಾರ್ಯದರ್ಶಿ ಗರೀಬ್ ನವಾಜ್ ಉಪಸ್ಥಿತರಿದ್ದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ವಲಯ ಅಧ್ಯಕ್ಷ ಉಸ್ಮಾನ್ ಸ್ವಾಗತಿಸಿ, ನಿರೂಪಿಸಿದರು.

 

error: Content is protected !!

Join the Group

Join WhatsApp Group