ಧರ್ಮದ ಹಾದಿಯಲ್ಲಿ ನಡೆದಾಗ ಸಮಾಜ ಸಮೃದ್ಧಿ ►ಆಯೋಧ್ಯಾನಗರ ಭಜನಾ ಮಂಡಳಿ ದಶಮಾನೋತ್ಸವದಲ್ಲಿ ಶಾಸಕ ಎಸ್.ಅಂಗಾರ

(ನ್ಯೂಸ್ ಕಡಬ) newskadaba.comಕಡಬ,ಫೆ.1.ಮನುಷ್ಯ ಧರ್ಮದ ಹಾದಿಯಲ್ಲಿ ನಡೆದಾಗ ಸಮಾಜದಲ್ಲಿ ಶಾಂತಿ ನೆಮ್ಮದಿ ತುಂಬಿ ಸಮೃದ್ಧಿಯ ಬದುಕು ನಮ್ಮದಾಗಲಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.ಅವರು ಕೊೈಲ ಗ್ರಾಮದ ಸಬಳೂರೂ ಆಯೋಧ್ಯಾನಗರ ಶ್ರೀ ರಾಮ ಭಜನಾ ಮಂಡಳಿಯ ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಆಸ್ತಿಕ ಬಾಂದವರಿಗೆ ದೇವರ ಅನುಗ್ರಹವನ್ನು ಸುಲಭವಾಗಿ ಪಡೆಯಲು ಭಜನೆಯೊಂದೆ ದಾರಿಯಾಗಿದೆ, ಇದಕ್ಕೆ ಭಜನಾ ಮಂದಿರಗಳು ಶ್ರದ್ಧಾಕೇಂದ್ರಗಳಾಗಿ ಸಹಕಾರಿಯಾಗಿವೆ, ಪ್ರತೀ ಮನೆಯಲ್ಲಿ ಭಜನೆಯ ಜಾಗೃತಿ ಮೂಡಿದಾಗ ಸಮಾಜದಲ್ಲಿ ಸೌಹಾರ್ಧ ಬದುಕಿಗೆ ಪ್ರೇರಣೆ ಸಿಗುತ್ತದೆ, ನಾವು ಧರ್ಮವನ್ನು ಪಾಲಿಸಿದಾಗ ನಮ್ಮನ್ನು ಧರ್ಮ ಆಧರಿಸುತ್ತದೆ, ಆದ್ದರಿಂದ ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆದು ಇನ್ನೊಬ್ಬರಿಗೆ ಮಾದರಿಯಾಗಿ ಬದುಕಬೇಕು ಎಂದರು.

ಧಾರ್ಮಿಕ ವಿದ್ವಾಂಸ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಉಪನ್ಯಾಸ ನೀಡಿ ನಮ್ಮ ಬದುಕಿನ ಜಂಜಾಟದಲ್ಲಿ ಶಾಂತಿ ನೆಮ್ಮದಿ ಸಿಗಬೇಕಾದರೆ ನಮಗೆ ಧಾರ್ಮಿಕ ಕೇಂದ್ರಗಳು ಅನಿವಾರ್ಯವಾಗುತ್ತದೆ, ಭಜನಾ ಮಂದಿರಗಳು ಧಾರ್ಮಿಕ ಶ್ರದ್ಧೆಗಳನ್ನು ಉದ್ದೀಪನಗೊಳಿಸುವ ಕೇಂದ್ರಗಳಾಗಿದ್ದು ಇದರ ಉಳಿವು ಅಗತ್ಯ ಎಂದರು. ಭಜನಾ ಮಂಡಳಿಯ ಗೌರವಾದ್ಯಕ್ಷ ಬೆಳಿಯಪ್ಪ ಗೌಡ ತಿಮರೆಗುಡ್ಡೆ ಸಭೆಯ ಅಧ್ಯಕ್ಷತೆವಹಿಸಿದ್ದರು. ಮೂಡಬಿದರೆ ಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕ ಪರಮೇಶ್ವರ ಗೌಡ ಸಬಳೂರು ಅತಿಥಿಯಾಗಿ ಮಾತನಾಡಿದರು. ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಬಳೂರು ಒಕ್ಕೂಟದ ಅಧ್ಯಕ್ಷ ರಾಜೀವ ಗೌಡಪಟ್ಟೆದಮೂಲೆ, ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿಎಂಸಿ ಅಧ್ಯಕ್ಷ ಶೇಖರ ಗೌಡ ಕೊಲ್ಯ. ಅಯೋಧ್ಯಾನಗರ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಗುರುಪ್ರಸಾದ್ ಪಟ್ಟೆದಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಹಾಗೂ ಧಾರ್ಮಿಕ ಮುಂದಾಳು ರಾಜೀವ ಗೌಡ ಅವರನ್ನು ಸನ್ಮಾನಿಸಲಾಯಿತು.

ಭಜನಾ ಮಂಡಳಿಯ ಅಧ್ಯಕ್ಷ ರಾಮಚಂದ್ರ ನಾಯ್ಕ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಚಿದಾನಂದ ಪಾನ್ಯಾಲ್ ವಂದಿಸಿದರು. ಪರ್ತಕರ್ತ ಕೆ.ಎಸ್.ಬಾಲಕೃಷ್ಣ ಕೊೈಲ ಹಾಗೂ ಭಜನಾ ಮಂಡಳಿಯ ಕಾರ್ಯದರ್ಶಿ ಉಮೇಶ್ ಬುಡಲೂರು ಕಾರ್ಯಕ್ರಮ ನಿರೂಪಿಸಿದರು. ದಶಮಾನೋತ್ಸವ ಕಾರ್ಯಕ್ರಮದ ನಿಮಿತ್ತ ಭಜನಾ ಮಂದಿರದಲ್ಲಿ ಬೆಳಿಗ್ಗೆ ಗಣಹೋಮ, ಸಂಜೆ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮದ ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಿತು.

error: Content is protected !!

Join the Group

Join WhatsApp Group