ಕಡಬ: ವೃತ್ತಿ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ

(ನ್ಯೂಸ್ ಕಡಬ) newskadaba.com ಕಡಬ, ಜು.29. ಉದ್ಯೋಗ ಖಾತರಿ ಯೋಜನೆ ಬಂದ ಬಳಿಕ ಸಮಾಜದಲ್ಲಿ ಬಹಳಷ್ಟು ಅಭಿವೃದ್ದಿ ಕಾರ್ಯಗಳು ನಡೆದಿದ್ದು ಇದು ಬಡವರಿಗೆ ವರದಾನವಿದ್ದಂತೆ ಎಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮಾಜಿ ಓಂಬುಡ್ಸ್‌ಮೆನ್ ಶೀನಶೆಟ್ಟಿ ಹೇಳಿದರು.

ಅವರು ಕಡಬ ಸಮೀಪದ ಕೊರುಂದೂರು ಅಂಗನವಾಡಿ ಕೇಂದ್ರದಲ್ಲಿ ನಡೆದ ಮಹಿಳೆಯರ ವೃತ್ತಿ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆ ಬಂದ ಬಳಿಕ ಗ್ರಾಮ ಮಟ್ಟದ ಅಭಿವೃದ್ದಿಯಲ್ಲಿ ಬದಲಾವಣೆ ಕಂಡಿದೆ, ಈ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕನ್ನು ನಾವು ಶೇಖರಿಸಿ ಸೂಕ್ತ ವಿಲೇವಾರಿಗೆ ವ್ಯವಸ್ಥೆ ಮಾಡಬೇಕು. ಈ ಕಾರ್ಯದಲ್ಲಿ ಅನೇಕ ಮಹಿಳೆಯರು ಕೈ ಜೋಡಿಸಿ ಯಶಸ್ವಿಯನ್ನು ಕಂಡಿದ್ದಾರೆ. ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ಅವರು ಕರೆ ನೀಡಿದರು.

ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ಕೊರಂದೂರು ಅಂಗನವಾಡಿ ಸಮನ್ವಯ ಸಮಿತಿ ಅಧ್ಯಕ್ಷೆ ನೀಲಾವತಿ ಶಿವರಾಮ್, ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್. ಮಾತನಾಡಿದರು. ವೇದಿಕೆಯಲ್ಲಿ ಕಡಬ ಗ್ರಾ.ಪಂ. ಸದಸ್ಯರಾದ ಶರೀಫ್ ಎ.ಎಸ್., ಕೃಷ್ಣಪ್ಪ ಪುಜಾರಿ, ಸರೋಜಿನಿ ಆಚಾರ್ಯ, ಸುಗ್ರಾಮ ಸದಸ್ಯೆ ಲೀಲಾವತಿ, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕಿ ದಿವ್ಯಾ ಮೊದಲಾದವರು ಉಪಸ್ಥಿತರಿದ್ದರು. ಕಡಬ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿ, ಕಾರ್ಯದರ್ಶಿ ಆನಂದ ಗೌಡ ವಂದಿಸಿದರು.

error: Content is protected !!

Join the Group

Join WhatsApp Group