ಕಡಬ: ಅಡ್ಡಾದಿಡ್ಡಿಯಾಗಿ ರಸ್ತೆಗೆ ಬಂದ ನರಿಗಳು ► ದ್ವಿಚಕ್ರ ವಾಹನ ಪಲ್ಟಿಯಾಗಿ ಸಹ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜ. 03. ನರಿಗಳು ರಸ್ತೆಗೆ ಅಡ್ಡ-ದಿಡ್ಡಿಯಾಗಿ ಓಡಿ ಬಂದು ರಸ್ತೆ ದಾಟುವ ವೇಳೆ ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನ ಪಲ್ಟಿಯಾದ ಪರಿಣಾಮ ಗಂಭೀರ ಗಾಯಗೊಂಡಿದ್ದ ಸಹ ಸವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಗುರುವಾರದಂದು ನಡೆದಿದೆ.

ಮೃತರನ್ನು ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮುಡಿಮಾರು ನಿವಾಸಿ ಹರಿಣಾಕ್ಷ(32) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗಿನ ಜಾವ 4.30 ಗಂಟೆಗೆ ತನ್ನ ಸ್ನೇಹಿತ ಸಂತೋಷ್ ಕುಮಾರ್ ಎಂಬವರೊಂದಿಗೆ ಸಹ ಸವಾರರಾಗಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆಂದು ತೆರಳುತ್ತಿದ್ದ ವೇಳೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಸಮೀಪದ ಸಿಪಿಸಿಆರ್ಐ ಸಮೀಪದ ಕಾಡಿನಿಂದ ಏಕಾಏಕಿ ರಸ್ತೆಗೆ ಮೂರು ನರಿಗಳು ಓಡಿ ಬಂದಿದ್ದು, ಈ ವೇಳೆ ಸವಾರನ ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನವು ಪಲ್ಟಿಯಾಗಿದೆ. ಘಟನೆಯಲ್ಲಿ ಸವಾರ ಸಂತೋಷ್ ಕುಮಾರ್ ಹಾಗೂ ಸಹ ಸವಾರ ಹರಿಣಾಕ್ಷ ಗಾಯಗೊಂಡಿದ್ದು, ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಹರಿಣಾಕ್ಷ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತ ಹರಿಣಾಕ್ಷ ತನ್ನ ಮರಣಾನಂತರ ಅಂಗಾಂಗ ದಾನ ಮಾಡುವ ಇಂಗಿತ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಆತನ ಕುಟುಂಬಿಕರು ಹರಿಣಾಕ್ಷರ ಕಿಡ್ನಿ, ಲಿವರ್, ಕಣ್ಣುಗಳನ್ನು ದಾನ ಮಾಡಿದ್ದು, ಗುರುವಾರ ಬೆಳಗಿನ ಜಾವ ಝೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಬೆಂಗಳೂರಿಗೆ ರವಾನಿಸಲಾಗಿದೆ.

error: Content is protected !!

Join the Group

Join WhatsApp Group