ಯಶ್ ಅಭಿನಯದ ‘ಕೆಜಿಎಫ್’ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ► ಯಶ್ ಹೆಲಿಕಾಪ್ಟರ್ ನಲ್ಲಿ ಕುಕ್ಕೇಗೆ ಆಗಮಿಸಿದ್ದು ಮುಳುವಾಯಿತೇ..? ► ಸ್ಥಳೀಯರ ಮಾತು – ಅಭಿಮಾನಿಗಳ ನಿರಾಶೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.21. ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ದೇಶಾದ್ಯಂತ ಇಂದು ತೆರೆಕಾಣಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹು ನಿರೀಕ್ಷಿತ ‘ಕೆಜಿಎಫ್’ ಚಿತ್ರ ಬಿಡುಗಡೆಗೆ ಕೋರ್ಟ್ ಗುರುವಾರದಂದು ಮಧ್ಯಂತರ ತಡೆಯಾಜ್ಞೆ ನೀಡಿದೆ.

‘ಕೆಜಿಎಫ್’ ರೌಡಿ ತಂಗಂ ಜೀವನಾಧರಿತ ಸಿನಿಮಾ ಆಗಿದ್ದು, ಈ ಹಿಂದೆಯೇ ತಂಗಂ ಜೀವನಾಧಾರಿತ ಕತೆಯನ್ನು ಚಿತ್ರೀಕರಿಸಲು ತಾನು ಹಕ್ಕು ಪಡೆದಿದ್ದೇ‌ನೆ ಎಂದು ಆರೋಪಿಸಿ ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 10ನೇ ಸಿಟಿ ಸಿವಿಲ್ ಕೋರ್ಟ್, 2019, ಜನವರಿ 7ರ ವರೆಗೆ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ. ಚಿತ್ರದ ಟ್ರಯಲ್ ಮೂಲಕವೇ ಭಾರಿ ಸುದ್ದಿ ಮಾಡಿದ್ದ 40 ಕೋಟಿ ರುಪಾಯಿ ವೆಚ್ಚದ ಕೆಜಿಎಫ್​ ಚಿತ್ರದ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ‘ಕೆಜಿಎಫ್’ಗಾಗಿ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿದೆ.

ಈ ನಡುವೆ ಕೆಜಿಎಫ್ ಚಿತ್ರ ಬಿಡುಗಡೆಗೆ ನಾಯಕ ನಟ ಯಶ್ ಹೆಲಿಕಾಪ್ಟರ್ ಮೂಲಕ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿರುವುದೇ ಅಡ್ಡಯಾಗಿದೆ ಎನ್ನುವ ಮಾತು ಸುಬ್ರಹ್ಮಣ್ಯ ಪರಿಸರದಲ್ಲಿ ಕೇಳಿ ಬರುತ್ತಿದೆ. ನಟ ಯಶ್ ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸುದ್ಧಿ ಇದೀಗ ಹಲವು ಉಹಾಪೋಹಗಳಿಗೆ ಕಾರಣವಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಮೂಲಕ ಬಂದವರು ತನ್ನ ಅಧಿಕಾರ, ಅಂತಸ್ತು ಕಳೆದುಕೊಳ್ಳುತ್ತಾರೆ ಎನ್ನುವ ವಿಚಾರ ಸುಬ್ರಹ್ಮಣ್ಯ ಭಾಗದ ಜನರ ಪ್ರತಿಯೊಬ್ಬರ ಬಾಯಲ್ಲೂ ಕೇಳಬಹುದಾಗಿದೆ. ಇದೇ ಕಾರಣಕ್ಕಾಗಿಯೇ ಕೆಲವು ದಿನಗಳ ಹಿಂದೆ ಕ್ಷೇತ್ರಕ್ಕೆ ಯಶ್ ಹೆಲಿಕಾಪ್ಟರ್ ಮೂಲಕ ಆಗಮಿಸಿದಾಗ ಈ ಮಾತು ಮುನ್ನೆಲೆಗೆ ಬಂದಿತ್ತು. ಹಿಂದಿನ ಹೆಲಿಕಾಪ್ಟರ್ ಗಳು ದೇವಸ್ಥಾನಕ್ಕೆ ಸುತ್ತು ಹೊಡೆದು ಬಳಿಕ ಲ್ಯಾಂಡಿಂಗ್ ಆಗುತ್ತಿತ್ತು. ಹೀಗೆ ಸುತ್ತು ಹೊಡೆಯುವುದು ಕ್ಷೇತ್ರಕ್ಕೆ ಸಂಬಂಧಪಟ್ಟ ಗರುಡ ಮಾತ್ರವಾಗಿದೆ. ಬೇರೆ ಯಾರೇ ದೇವಸ್ಥಾನಕ್ಕೆ ಸುತ್ತು ಹೊಡೆದು ಬಂದರೆ ಅಂತಸ್ತನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ಸ್ಥಳೀಯರ ನಂಬಿಕೆ.

ಇಲ್ಲಿನ ಜನರ ಪ್ರಕಾರ ಈ ಹಿಂದೆ ಕ್ಷೇತ್ರಕ್ಕೆ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಹೆಲಿಕಾಪ್ಟರ್ ಮೂಲಕ ಕ್ಷೇತ್ರಕ್ಕೆ ಆಗಮಿಸಿದ್ದರು. ಆದರೆ ಬಳಿಕದ ದಿನಗಳಲ್ಲಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಅದೇ ಪ್ರಕಾರ ಹಿಂದೆ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಕೂಡಾ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಏರಿ ಬಂದಿದ್ದರು. ಅಂದು‌ ಕೂಡಾ ಅವರು ತನ್ನ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿತ್ತು. ಅದೇ ಪ್ರಕಾರ ಮದ್ಯದ ದೊರೆ ವಿಜಯ ಮಲ್ಯ ಕೂಡಾ ಕುಕ್ಕೆಗೆ ಹೆಲಿಕಾಪ್ಟರ್ ಮೂಲಕ ಬಂದು ಸೇವೆ ಸಲ್ಲಿಸಿದ್ದರು. ಆ ಬಳಿಕದ ದಿನಗಳಿಂದ ವಿಜಯ ಮಲ್ಯರ ಉದ್ಯಮ ರಂಗದಲ್ಲಿ ಏರುಪೇರಾಗಿತ್ತು ಎನ್ನುವುದನ್ನು ಇಲ್ಲಿನ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ.

error: Content is protected !!

Join the Group

Join WhatsApp Group