ನೀವು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಬೇಕೇ..? ► ಪ್ರವರ್ಗ ‘ಬಿ’ & ‘ಸಿ’ ದೇವಸ್ಥಾನದ ಸಮಿತಿಗೆ ಅರ್ಹರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.07. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮ 1997 ರ ಕಲಂ 25ರ ಅನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಪ್ರವರ್ಗ ‘ಬಿ‘ ಮತ್ತು ‘ಸಿ’ ಗೆ ಸೇರಿದ ದೇವಸ್ಥಾನಗಳಿಗೆ  ವ್ಯವಸ್ಥಾಪನಾ ಸಮಿತಿಯ ಸದಸ್ಯತ್ವಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರವರ್ಗ ‘ಬಿ‘ ಮತ್ತು ‘ಸಿ’ ಗೆ ಸೇರಿದ ದೇವಸ್ಥಾನಗಳಿಗೆ ಮೂರು  ವರ್ಷಗಳ ಅವಧಿಗಾಗಿ 9 ಜನ ಸದಸ್ಯರನ್ನು ಒಳಗೊಂಡು ವ್ಯವಸ್ಥಾಪನಾ ಸಮಿತಿಯನ್ನು ರಚಿಸುವುದಕ್ಕಾಗಿ ಆಸಕ್ತಿಯುಳ್ಳ ಭಕ್ತಾಧಿಗಳಿಂದ ನಿಗದಿತ ನಮೂನೆ- 1 (ಬಿ) (22 ನೇ ನಿಯಮ) ದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಭಕ್ತಾಧಿಗಳು ನಿಗಧಿತ ಅರ್ಜಿ ನಮೂನೆ 1 (ಬಿ) ಯಲ್ಲಿ ಭರ್ತಿ ಮಾಡಿ ಈ ಕೆಳಕಂಡ ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 22 ರಂದು ಸಂಜೆ 5.30 ರ ಒಳಗಾಗಿ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ದ.ಕ.ಮಂಗಳೂರು ಇಲ್ಲಿಗೆ ಸ್ವೀಕೃತವಾಗುವಂತೆ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು  ಪರಿಗಣಿಸಲಾಗುವುದಿಲ್ಲ. (ನಿಗದಿತ ಅರ್ಜಿ ನಮೂನೆ ಸಹಾಯಕ ಆಯುಕ್ತರ ಕಚೇರಿ, ಧಾರ್ಮಿಕ ದತ್ತಿ ಇಲಾಖೆ, ದ.ಕ. ಮಂಗಳೂರು ಇಲ್ಲಿ ಲಭ್ಯವಿದೆ).

ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳು: ಗುರುತಿನಚೀಟಿ (ಚುನಾವಣಾ ಗುರುತಿನ ಚೀಟಿ ಅಥವಾ ಇತರ ಯಾವುದಾದರೂ ಗುರುತಿನ ಚೀಟಿ), ಒಂದು ಫೋಟೋ (ನಿಗದಿತ ಅರ್ಜಿ ನಮೂನೆಯಲ್ಲಿ ಅಂಟಿಸತಕ್ಕದ್ದು), ಮೀಸಲಾತಿ ಕೋರಿದ್ದಲ್ಲಿ ಜಾತಿ ದೃಢೀಕರಣ ಪತ್ರದ ಪ್ರತಿ.
ಪ್ರತಿಯೊಂದು ಸಂಸ್ಥೆಗೆ/ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸದಸ್ಯರ ಮೀಸಲಾತಿ ವಿವರ ಕೆಳಕಂಡಂತಿದೆ: (ಒಟ್ಟು 9 ಜನ  ಸದಸ್ಯರು).  ದೇವಸ್ಥಾನವಾಗಿದ್ದಲ್ಲಿ, ಪ್ರಧಾನ ಅರ್ಚಕ/ ಅರ್ಚಕ ಒಂದು, ಪರಿಶಿಷ್ಟ ಜಾತಿ/  ಪರಿಶಿಷ್ಟ ಪಂಗಡ ಕನಿಷ್ಠ ಒಬ್ಬರು, ಮಹಿಳೆಯರು ಇಬ್ಬರು, ದೇವಸ್ಥಾನ/ಸಂಸ್ಥೆಯು ಇರುವ  ಪ್ರದೇಶದ ಸ್ಥಳೀಯರಲ್ಲಿ ಕನಿಷ್ಠ ಒಬ್ಬರು, ಇತರೆ ನಾಲ್ಕು.

ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರರು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅದಿನಿಯಮ 1997 ರ ಕಲಂ 25 (2), (3) ಮತ್ತು (4) ರಲ್ಲಿ ಸೂಚಿಸಿರುವಂತೆ, ಈ ಕೆಳಕಂಡ ಅರ್ಹತೆ/ ಅನರ್ಹತೆಗಳನ್ನು  ಹೊಂದಿರತಕ್ಕದ್ದು.
ಅರ್ಹತೆಗಳು: ಅರ್ಜಿದಾರನು ದೇವರಲ್ಲಿ ನಂಬಿಕೆಯುಳ್ಳವ ಆಗಿರತಕ್ಕದ್ದು. ಇಪ್ಪತ್ತೈದು ವರ್ಷ ವಯಸ್ಸಿನವನಾಗಿರತಕ್ಕದ್ದು. ಒಳ್ಳೆಯ ವರ್ತನೆ ಹಾಗೂ ಹೆಸರು ಹೊಂದಿದ್ದ ಹಾಗೂ ಸಂಸ್ಥೆಯು ಇರುವ ಪ್ರದೇಶದಲ್ಲಿ ಗೌರವಕ್ಕೆ ಪಾತ್ರನಾಗಿರತಕ್ಕದ್ದು.

ಯಾವೊಬ್ಬ ವ್ಯಕ್ತಿಯು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ವ್ಯವಸ್ಥಾಪನಾ ಸಮಿತಿಗಳಿಗೆ ಸದಸ್ಯನಾಗುವುದಕ್ಕೆ ಅರ್ಹನಾಗಿರತಕ್ಕದ್ದಲ್ಲ.

ಯಾವುದೇ ಹಂತದಲ್ಲಿ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರುವ ಯಾವೊಬ್ಬ ವ್ಯಕ್ತಿಯು ವ್ಯವಸ್ಥಾಪನಾ ಸಮಿತಿಯ ಸದಸ್ಯನಾಗಿರತಕ್ಕದ್ದಲ್ಲ.
ಯಾವುದೇ ಸಕ್ಷಮ  ನ್ಯಾಯಾಲಯದಿಂದ  ಅವಿಮುಕ್ತ ದಿವಾಳಿಯೆಂದು ಘೋಷಿತನಾಗಿದ್ದರೆ, ಅಥವಾ ಅಸ್ವಸ್ಥಚಿತ್ತನಾಗಿದ್ದು ಮತ್ತು ಹಾಗೆಂದು ಸಕ್ಷಮ ನ್ಯಾಯಾಲಯದಿಂದ ಘೋಷಿಸಲಾಗಿದ್ದರೆ ಅಥವಾ ಕಿವುಡ ಅಥವಾ ಮೂಕನಾಗಿದ್ದರೆ ಅಥವಾ ಕುಷ್ಠ ಇತರ ಯಾವುದೇ ಭಯಂಕರ ಅಥವಾ ಸಾಂಕ್ರಾಮಿಕ ಖಾಯಿಲೆ ಪೀಡಿತನಾಗಿದ್ದರೆ, ಅಥವಾ
(5) ಸಂಸ್ಥೆಯ ಯಾವುದೇ ಸ್ವತ್ತಿನ ಅಥವಾ ಮಾಡಿಕೊಳ್ಳಲಾದ ಯಾವುದೇ ಕರಾರಿನ  ಸಂಬಂಧದಲ್ಲಿ ಈಗಿರುವ ಗುತ್ತಿಗೆಯಲ್ಲಿ ಸಂಸ್ಥೆಗಾಗಿ ಮಾಡಲಾದ ಕಾಮಗಾರಿಯಲ್ಲಿ  ಪ್ರತ್ಯಕ್ಷ ಅಥವಾ ಪರೋಕ್ಷ  ಹಿತಾಸಕ್ತಿ ಹೊಂದಿದ್ದರೆ ಅಥವಾ ಸಂಸ್ಥೆಗೆ ತಾನು ಕೊಡಬೇಕಾದ ಯಾವುದೇ ಪ್ರಕಾರದ ಬಾಕಿಯನ್ನು ಕೊಡದೇ  ಉಳಿಸಿಕೊಂಡಿದ್ದರೆ, ಅಥವಾ ಸಂಸ್ಥೆಯ ಪರವಾಗಿ ಅಥವಾ ವಿರುದ್ಧವಾಗಿ ಕಾನೂನು ವೃತ್ತಿಗಾರನಾಗಿ ಹಾಜರಾಗುತ್ತಿದ್ದರೆ ಅಥವಾ ನೈತಿಕ ಅಧ:ಪತನವನ್ನು ಒಳಗೊಳ್ಳುವ ಒಂದು ಅಪರಾಧಕ್ಕಾಗಿ ಕ್ರಿಮಿನಲ್ ನ್ಯಾಯಾಲಯದಿಂದ ಶಿಕ್ಷಿತನಾಗಿದ್ದು ಮತ್ತು ಅಂಥ ಶಿಕ್ಷೆಯನ್ನು ಹಿಂತೆಗೆದುಕೊಂಡಿದ್ದರೆ ಅಥವಾ ಅಪರಾಧವನ್ನು  ಕ್ಷಮಿಸಿರದಿದ್ದರೆ, ಅಥವಾ    ಯಾವಾಗಲಾದರೂ ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧವಾಗಿ  ವರ್ತಿಸಿದ್ದರೆ ಅಥವಾ ಅಂತ ಸಂಸ್ಥೆಯ ಯಾವುದೇ ಪದವನ್ನು ಧಾರಣ ಮಾಡಿದ್ದರೆ ಅಥವಾ ಒಬ್ಬ ನೌಕರನಾಗಿದ್ದರೆ (ಅರ್ಚಕರನ್ನು ಹೊರತು ಪಡಿಸಿ) ಅಥವಾ ಅಂತಹ ಸಂಸ್ಥೆಯಿಂದ ಯಾವುದೇ ಉಪಲಬ್ದಿಗಳನ್ನು ಅಥವಾ ಅನುಷಂಗಿಕ ಲಾಭವನ್ನು ಸ್ವೀಕರಿಸುವ ವ್ಯಕ್ತಿಯಾಗಿದ್ದರೆ ಅಥವಾ ಮದ್ಯಪಾನ ಅಥವಾ ಮಾದಕದ್ರವ್ಯ ಸೇವನೆಯ ವ್ಯಸನಿಯಾಗಿದ್ದರೆ ಅಥವಾ ಹಿಂದೂ ಅಲ್ಲದಿದ್ದರೆ ಅಥವಾ ಹಿಂದೂ ಆಗಿದ್ದು, ತರುವಾಯದಲ್ಲಿ ಯಾವುದೇ ಇತರ ಧರ್ಮಕ್ಕೆ ಪರಿವರ್ತಿತನಾಗಿದ್ದರೆ. ಯಾವುದೇ ಅಧಿಸೂಚಿತ ಸಂಸ್ಥೆಯ ವ್ಯವಸ್ಥಾಪನಾ ಸಮಿತಿಯ ಸದಸ್ಯನಾಗಿ ಅಥವಾ ನೇಮಕಗೊಳ್ಳಲು ಮುಂದುವರಿಯಲು ಅನರ್ಹನಾಗಿರತಕ್ಕದ್ದು.

ವಿಶೇಷ ಸೂಚನೆ: ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಪೂರ್ಣ ವಿಳಾಸವನ್ನು, ದೂರವಾಣಿ ಸಂಖ್ಯೆ ಸಮೇತ ಸ್ವಷ್ಟವಾಗಿ ನಮೂದಿಸತಕ್ಕದ್ದು ಹಾಗೂ  ನಮೂನೆಯು ಸಹಾಯಕ ಆಯುಕ್ತರ ಕಛೇರಿ, ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಧಿಕಾರಿಯವರ ಕಛೇರಿ, ದ.ಕ ಮಂಗಳೂರು ಇಲ್ಲಿಂದ ಪಡೆದುಕೊಳ್ಳಬಹುದು. ಹಾಗೂ ಪೋಲೀಸು ಸತ್ಯಾಪನಾ ವರದಿಯೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಆಯುಕ್ತರು, ಹಿಂ.ಧಾ.ಸಂ. ಮತ್ತು ಧ.ದತ್ತಿ ಇಲಾಖೆ, ಹಾಗೂ ಪದನಿಮಿತ್ತ ಕಾರ್ಯದರ್ಶಿ, ಜಿಲ್ಲಾ ಧಾರ್ಮಿಕ ಪರಿಷತ್, ದ.ಕ. ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group