ಅಲೆಮಾರಿ ಮಹಿಳೆಯರನ್ನು ವಿಚಾರಿಸಿದಾಗ ಹೊರಬಂತು ಐಶಾರಾಮಿ ಜೀವನದ ರಹಸ್ಯ ► ಮಹಿಳೆಯರ ಮಾತು ಕೇಳಿ ಅಚ್ಚರಿಗೊಂಡ ಉಪ್ಪಿನಂಗಡಿ ಪೊಲೀಸರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.14. ಮನೆಗೆಲಸಕ್ಕೆಂದು ಸೇರಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಮೂವರು ಅಲೆಮಾರಿ ಮಹಿಳೆಯರನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು 4,39,680.00 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬುಧವಾರದಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅಲೆಮಾರಿ ಜನಾಂಗಕ್ಕೆ ಸೇರಿದ ಮೂವರು ಹೆಂಗಸರು ಚಿಕ್ಕ ಮಕ್ಕಳೊಂದಿಗೆ ಕೈಯಲ್ಲಿ ಬ್ಯಾಗ್ ಗಳನ್ನು ಹಿಡಿದುಕೊಂಡು ಸಂಶಯಿತರಾಗಿ ಸುತ್ತಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್‌‌ಐ ನಂದಕುಮಾರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದಾಗ ಮಹಿಳೆಯರು ನದಿಯ ಕಡೆಗೆ ಓಡಿ ತಪ್ಪಿಸಲು ಯತ್ನಿಸಿದ್ದಾರೆ. ಮಹಿಳೆಯರನ್ನು ಬಂಧಿಸಿ ವಿಚಾರಿಸಿದ್ದು, ಸರಿಯಾದ ಮಾಹಿತಿ ನೀಡದೆ ಇದ್ದುದರಿಂದ ಅವರ ಕೈಯಲ್ಲಿದ್ದ ಬ್ಯಾಗನ್ನು ತಪಾಸಣೆ ನಡೆಸಿದಾಗ 01 ಚಿನ್ನದ ಚೈನ್, 04 ಚಿನ್ನದ ಉಂಗುರಗಳು, 03 ಚಿನ್ನದ ಕಡಗಗಳು, 02 ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು 156.140 ಗ್ರಾಂ. ತೂಕದ ಚಿನ್ನಾಭರಣ ಸೇರಿದಂತೆ 4,39,680.00 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಮಹಿಳೆಯರನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಡಗಲಿ ಬೌವನೂರು ನಿವಾಸಿ ಪವನ್ ರಾಜ್ ಎಂಬಾತನ ಪತ್ನಿ ದೇವಮ್ಮ (19), ಸಿದ್ದಣ್ಣ ಗೌಡ ಎಂಬವರ ಪುತ್ರಿ ಕು| ನಾಗಮ್ಮ ಯಾನೆ ರೂಪಾ (18) ಮತ್ತು ಪ್ರಕಾಶ್ ಯಾನೆ ಇಮ್ರಾನ್ ಎಂಬಾತನ ಪತ್ನಿ ಶ್ರೀಮತಿ ಗೀತಾ(24) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಮೂಲತಃ ಗದಗ ಜಿಲ್ಲೆಯವರಾಗಿರುವ ಇವರು ಅಲೆಮಾರಿ ಜನಾಂಗದವರಾಗಿದ್ದು, ವಿವಿಧೆಡೆಗಳಲ್ಲಿ ಭಿಕ್ಷೆ ಬೇಡುವುದಲ್ಲದೆ ಸ್ಥಳೀಯವಾಗಿ ಶ್ರೀಮಂತರ ಮನೆಗಳಲ್ಲಿ ತೋಟದ ಕೆಲಸ, ಅಡಿಕೆ ಸುಲಿಯುವುದು ಮತ್ತು ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಕೆಲಸಕ್ಕೆ ಹೋಗದ ಸಮಯದಲ್ಲಿ ರೈಲ್ವೆ ನಿಲ್ದಾಣದಲ್ಲಿ, ಬಸ್ ನಿಲ್ದಾಣದಲ್ಲಿ, ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ ಚಿಕ್ಕ ಮಕ್ಕಳನ್ನು ಜೊತೆಯಲ್ಲಿರಿಸಿ ಭಿಕ್ಷೆ ಬೇಡಿ ಸಂಪಾದಿಸಿದ ಹಣವನ್ನು ಹೆಚ್ಚಾಗಿ ಮದ್ಯ ಸೇವನೆಗೆ ಮತ್ತು ಶೋಕಿ ಜೀವನಕ್ಕಾಗಿ ಬಳಸುತ್ತಿದ್ದು, ಸದ್ರಿ ಹಣವು ತಮ್ಮ ಶೋಕಿ ಜೀವನಕ್ಕೆ ಹಾಗೂ ಮದ್ಯಪಾನಕ್ಕೆ ಸಾಕಾಗದೇ ಇದ್ದುದ್ದರಿಂದ ಕೂಲಿ ಕೆಲಸಕ್ಕೆಂದು ತೆರಳಿದ ಮನೆಯ ಚಿನ್ನಾಭರಣಗಳನ್ನು ಕಳ್ಳತನ ಮಾಡುವ ಹವ್ಯಾಸವನ್ನು ಬೆಳೆಸಿದ್ದರು.

ಆರೋಪಿಗಳು ನವೆಂಬರ್ ಮೊದಲ ವಾರದಲ್ಲಿ ಮಂಗಳೂರಿನ ಬಜಾಲ್ ಎಂಬಲ್ಲಿರುವ ಆಟೋರಿಕ್ಷಾ ಚಾಲಕರ ಮನೆಗೆ ಕೂಲಿ ಕೆಲಸಕ್ಕೆಂದು ತೆರಳಿ, ಅವರ ಮನೆಯಿಂದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾರೆ. ಅಲ್ಲದೇ ಕಳೆದ ಒಂದು ವಾರದಿಂದ ಉಪ್ಪಿನಂಗಡಿಯ ನೇತ್ರಾವತಿ ನದಿ ಕಿನಾರೆಯಲ್ಲಿ ವಾಸ್ತವ್ಯ ಹೂಡಿದ್ದು, ಉಪ್ಪಿನಂಗಡಿಯಲ್ಲಿನ ಶ್ರೀಮಂತರ ಮನೆಗೆ ಕೂಲಿ ಕೆಲಸಕ್ಕೆ ತೆರಳಿ ಅಲ್ಲಿಂದ ಕಳ್ಳತನ ಮಾಡುವ ಸಂಚು ರೂಪಿಸಿರುವುದು ವಿಚಾರಣೆ ಸಮಯ ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಾ| ಬಿ. ಆರ್ ರವಿಕಾಂತೇಗೌಡ ಐ.ಪಿ.ಎಸ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸಜಿತ್‌ ವಿ,ಜೆ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀನಿವಾಸ್ ಬಿ.ಎಸ್‌‌. ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಗೋಪಾಲ ನಾಯ್ಕರವರ ಆದೇಶದಂತೆ, ಉಪ್ಪಿಂಗಡಿ ಪೊಲೀಸ್ ಠಾಣಾ ಪಿಎಸ್‌‌ಐ ನಂದ ಕುಮಾರ್ ಎಂ.ಎಂ ಹಾಗೂ ಸಿಬ್ಬಂದಿಗಳಾದ ದೇವದಾಸ್, ಸಂಗಯ್ಯಕಾಳೆ, ಹರಿಶ್ಚಂದ್ರ, ಗಣೇಶ್, ಚೋಮ, ಪ್ರತಾಪ್‌, ಜಗದೀಶ್, ಶ್ರೀಧರ, ಮನೋಹರ ಪಿ.ಸಿ, ಇರ್ಷಾದ್‌, ಸಚಿನ್, ನಾರಾಯಣ ಗೌಡ, ಯಶೋಧ, ರೇಣುಕಾ, ನಿವೇದಿತಾ ಹಾಗೂ ಪ್ರೀತಿದೀಪಾ ಭಾಗವಹಿಸಿದ್ದರು.

error: Content is protected !!

Join the Group

Join WhatsApp Group