ಮಂಗಳೂರು: ಚಿನ್ನದ ವ್ಯಾಪಾರಿಯ ದರೋಡೆಗೆ ಸಂಚು ► ಹನ್ನೊಂದು ಮಂದಿ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ನ.14. ನಗರದ ಜುವೆಲ್ಲರಿ ಮಾಲಕನ ದರೋಡೆಗೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ 11 ಮಂದಿ ಆರೋಪಿಗಳನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಬಂಧಿತರೆಲ್ಲರೂ ಮಂಗಳೂರು ಪರಿಸರದವರಾಗಿದ್ದು, ಬಂಧಿತರನ್ನು ಶೇಖ್ ಮಹಮ್ಮದ್ ಅನ್ಸಾರ್ ಯಾನೆ ಅನ್ಸಾರ್ (34), (21), ಮುಹಮ್ಮದ್ ತೌಸೀಫ್ ಯಾನೆ ತಚ್ಚು (24), ಉಬೈದುಲ್ಲಾ (25), ಮುಹಮ್ಮದ್ ತೌಸೀಫ್ ಯಾನೆ ತೌಸೀಫ್ (25), ಮುಹಮ್ಮದ್ ಅಲಿ (25), ಅಂತಾರಾಜ್ಯ ಆರೋಪಿಗಳಾದ ಅಹ್ಮದ್ ಕಬೀರ್ (30), ಅಸ್ಗರ್ ಅಲಿ (27), ಸಾಬೀತ್ (19), ಮುಹಮ್ಮದ್ ಸಬಾದ್ (22), ಅಮೀರ್ ಅಲಿ (19) ಎಂದು ಗುರುತಿಸಲಾಗಿದೆ.

ಆರೋಪಿಗಳು ಮಂಗಳೂರು ತಾಲೂಕು ಪಚ್ಚನಾಡಿ ಗ್ರಾಮದ ಮಂಗಳೂರು ಹಿಲ್ಸ್ ರಸ್ತೆಯಲ್ಲಿ ದರೋಡೆ ನಡೆಸಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಸಿದ್ದಗೌಡ ಭಜಂತ್ರಿ ಮತ್ತು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Also Read  ಧಗಧಗನೆ ಉರಿದ ಕೈಕಂಬ ಗುಡ್ಡೆ ► ಸುಮಾರು 4 ಎಕರೆ ಗುಡ್ಡೆ ಬೆಂಕಿಗಾಹುತಿ

ಬಂಧಿತ ಆರೋಪಿಗಳಿಂದ 50 ಸಾವಿರ ರೂ. ಮೌಲ್ಯದ ಮಾರುತಿ ಕಾರು, ಮೂರು ಲಕ್ಷ ರೂ. ಮೌಲ್ಯದ ಮಾರುತಿ ರಿಟ್ಝ್ ಕಾರು, ಮೂರು ಕಬ್ಬಿಣದ ಚೂರಿಗಳು, ಮೂರು ಮರದ ಸೋಂಟೆ, ನಾಲ್ಕು ನಕಲಿ ನಂಬರ್ ಪ್ಲೇಟ್, 16,050 ರೂ. ನಗದು ಸೇರಿದಂತೆ ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,66,050 ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ, ರಥಬೀದಿಯ ವೈಷ್ಣವಿ ಜುವೆಲ್ಲರಿ ಮಾಲಕ ಸಂತೋಷ್ ಎಂಬವರ ನಗದು ಮತ್ತು ಚಿನ್ನಾಭರಣಗಳನ್ನು ಲೂಟಿ ಮಾಡಲು ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ದರೋಡೆ ಸಂಚಿನಲ್ಲಿದ್ದ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕರ್ನಾಟಕ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಹಲ್ಲೆ ಪ್ರಕರಣ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ.

Also Read  ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ: ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಜಾರಿ

error: Content is protected !!
Scroll to Top