ಬೆಳ್ತಂಗಡಿ: ಮನೆ ಮಂದಿ ಮಲಗಿದ್ದ ವೇಳೆ ಪ್ರಜ್ಞೆ ತಪ್ಪಿಸಿದ ಕಳ್ಳರು ► ಲಕ್ಷಾಂತರ ರೂ. ಮೌಲ್ಯದ ನಗ,‌ ನಗದು ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.27. ಮನೆಮಂದಿ ರಾತ್ರಿ ಮಲಗಿದ್ದ ವೇಳೆ ಮುಖಕ್ಕೆ ಯಾವುದೋ ಅರಿವಳಿಕೆಯನ್ನು ಸಿಂಪಡಿಸಿ ಲಕ್ಷಾಂತರ ರೂ. ಮೌಲ್ಯದ ನಗ, ನಗದನ್ನು ದೋಚಿರುವ ಘಟನೆ ವೇಣೂರು ಠಾಣಾ ವ್ಯಾಪ್ತಿಯ ಹೊಸಂಗಡಿಯಲ್ಲಿ ನಡೆದಿದೆ.

ಹೊಸಂಗಡಿ ಗ್ರಾಮದ ಮಸ್ಕಲ ನಿವಾಸಿ ಕರುಣಾಕರ ಕೋಟ್ಯಾನ್ ಹಾಗೂ ಲೀಲಾ ದಂಪತಿ ರಾತ್ರಿ ಊಟ ಮಾಡಿ ಮಲಗಿದ್ದು, ಬೆಳಗ್ಗೆ ಎದ್ದು ನೋಡುವಾಗ ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಮುರಿದು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಕಪಾಟಿನಲ್ಲಿಟ್ಟಿದ್ದ ಚಿನ್ನದ ಸರ, ನೆಕ್ಲೆಸ್, ಬಳೆ, ಮುತ್ತಿನ ಚಿನ್ನದ ಸರ, ಉಂಗುರ, ಒಂದು ಜೊತೆ ಬೆಂಡೋಲೆ, ಎರಡು ಸಾವಿರ ರೂ‌. ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ದಂಪತಿಗೆ ಪ್ರಜ್ಞೆ ತಪ್ಪುವಂತಹ ಯಾವುದೋ ದ್ರಾವಣವನ್ನು ಸಿಂಪಡಿಸಿ ಕಳ್ಳರು ಈ ಕೃತ್ಯವೆಸಗಿದ್ದಾರೆ. ಸ್ಥಳಕ್ಕೆ ವೇಣೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

error: Content is protected !!
Scroll to Top