ಮಾನವೀಯತೆಯಿಂದ ಮಹಿಳೆಗೆ ಸಹಾಯ ಮಾಡಿದ ಕಡಬದ ಯುವಕರಿಬ್ಬರಿಗೆ ಪೊಲೀಸರಿಂದ ಹಲ್ಲೆ ► ಮಂಗಳೂರು ಪೊಲೀಸರ ಅಮಾನವೀಯ ವರ್ತನೆಗೆ ವ್ಯಾಪಕ ಆಕ್ರೋಶ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.26. ತನ್ನ ಮೊಬೈಲ್‌ ಗೆ ಬಂದ ಕೊನೆಯ ಕರೆಯ ಸಂಖ್ಯೆಯನ್ನು ತೆಗೆದು ಕೊಡುವಂತೆ ಮಹಿಳೆಯೋರ್ವರು ವಿನಂತಿಸಿದ್ದಕ್ಕೆ ಮಾನವೀಯತಾ ದೃಷ್ಟಿಯಿಂದ ಸಹಾಯ ಮಾಡಲು ತೆರಳಿದ ಕಡಬದ ಇಬ್ಬರು ಯುವಕರಿಗೆ ಮಫ್ತಿಯಲ್ಲಿದ್ದ ಪೊಲೀಸರು ಹಿಗ್ಗಾ ಮುಗ್ಗಾ ಝಾಡಿಸಿ ಒದ್ದು ಹಲ್ಲೆ ನಡೆಸಿದ ಅಮಾನವೀಯ ಘಟನೆ ಬುದ್ದಿವಂತರ ಜಿಲ್ಲೆಯ ಹೃದಯಭಾಗದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮೂಲತಃ ಕಡಬ ನಿವಾಸಿ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಜೋಬಿನ್ ಎಂಬವರ ಚಿಕ್ಕಪ್ಪ ಅನಾರೋಗ್ಯದ ನಿಮಿತ್ತ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಜೋಬಿನ್ ಹಾಗೂ ಶಿರಾಡಿಯ ವರ್ಗೀಸ್ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದು, ಸೋಮವಾರ ರಾತ್ರಿ ನಗರದ ಮಿಲಾಗ್ರಿಸ್ ಬಳಿಯಲ್ಲಿನ ಹೊಟೇಲ್ ನಲ್ಲಿ ಊಟ ಮುಗಿಸಿ ಆಸ್ಪತ್ರೆಯತ್ತ ತೆರಳುತ್ತಿದ್ದಾಗ ಮಹಿಳೆಯೊಬ್ಬರು ತನ್ನ ಮೊಬೈಲನ್ನು ಜೋಬಿನ್ ಕೈಗೆ ಕೊಟ್ಟು ಕೊನೆಗೆ ಬಂದ ಕರೆಯ ನಂಬರ್ ತೆಗೆದುಕೊಡುವಂತೆ ವಿನಂತಿಸಿದ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ಜೋಬಿನ್ ಮೊಬೈಲ್ ಪಡೆದುಕೊಂಡು ಸಂಖ್ಯೆಯನ್ನು ಹುಡುಕುತ್ತಾ ಇದ್ದ ವೇಳೆ ಆಟೋ ರಿಕ್ಷಾದಲ್ಲಿ ಬಂದಿಳಿದ ಮಫ್ತಿಯಲ್ಲಿದ್ದ ನಾಲ್ವರು ಪೊಲೀಸರು ಇವರಿಬ್ಬರಿಗೂ ಯದ್ವಾತದ್ವಾ ಥಳಿಸಿ ಕಂಕನಾಡಿ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಠಾಣೆಯಲ್ಲಿ ಇಬ್ಬರ ಬಟ್ಟೆ ಬಿಚ್ಚಿಸಿ ಒಳ ಉಡುಪಿನಲ್ಲಿ ಕೂರಿಸಿ ಹಲ್ಲೆಗೈದಿದ್ದಲ್ಲದೆ ಕ್ರೈಸ್ತರ ಪವಿತ್ರ ಮಾಲೆಯನ್ನ ಕಿತ್ತು ಹಾಕಿದ್ದಾರೆ ಎನ್ನುವುದು ಹಲ್ಲೆಗೊಳಗಾದ ಜೋಬಿನ್ ಆರೋಪ. ಪೊಲೀಸರ ಈ ನಡೆಯು ಕ್ರೈಸ್ತ ಸಮುದಾಯವನ್ನು ಕೆರಳಿಸಿದ್ದು, ಮಲಯಾಳಿ ಕ್ರಿಶ್ಚಿಯನ್ ಸಂಘದ ಪದಾಧಿಕಾರಿ, ಮಂಗಳೂರು ಪಾಲಿಕೆ ಕಾಪೋರೇಟರ್ ವಿನಯ್ ರಾಜ್ ಯುವಕರ ಪರ ನ್ಯಾಯಕ್ಕೆ ಆಗ್ರಹಿಸಿ ಮಲಯಾಳಿ ಕ್ರಿಶ್ಚಿಯನ್ನರನ್ನು ಸೇರಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕಾಗಮಿಸಿದ ಇನ್ಸ್‌ಪೆಕ್ಟರ್ ಗಳಾದ ರವೀಶ್ ನಾಯ್ಕ್ ಹಾಗೂ ಮಾರುತಿ ನಾಯಕ್ ತಪ್ಪಿತಸ್ಥ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈ ಬಿಡಲಾಗಿದೆ.

error: Content is protected !!

Join the Group

Join WhatsApp Group