ತುಳು ಭಾಷೆ ಉಳಿಯಬೇಕಾದರೆ ತುಳುವರು ಜಾಗೃತರಾಗಬೇಕು: ಎ.ಸಿ.ಭಂಡಾರಿ ► ರಾಮಕುಂಜದಲ್ಲಿ ತುಳು ಕಲಿಯುವ ಮಕ್ಕಳ ರಾಜ್ಯ ಮಟ್ಟದ ರಸಮಂಟಮೆ

(ನ್ಯೂಸ್ ಕಡಬ) newskadaba.com ಕಡಬ, ಜು.29. ತುಳು ಭಾಷೆ ನಮ್ಮ ಮಾತೃಭಾಷೆಯಾಗಿದ್ದು, ಇದರಲ್ಲಿ ತುಳು ಸಂಸ್ಕತಿ ಅಡಕವಾಗಿದೆ. ತಾಯಿ ಭಾಷೆಯ ಬಗ್ಗೆ ಮಮಕಾರ ಬೆಳೆಸಿಕೊಂಡು ತುಳುವಿನ ಬಗ್ಗೆ ಜಾಗೃತಿ ಮೂಡಿಸಿ ಅದರ ಉಳಿವಿಗೆ ಶ್ರಮಿಸಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ ಭಂಡಾರಿ ಹೇಳಿದರು.

ಅವರು ಭಾನುವಾರದಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ನೇತ್ರಾವತಿ ತುಳುಕೂಟ ರಾಮಕುಂಜ, ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಜಂಟಿ ಸಹಯೋಗದಲ್ಲಿ ರಾಜ್ಯದಲ್ಲಿ ತುಳು ಭಾಷೆಯನ್ನು ಕಲಿಯುತ್ತಿರುವ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ತುಳುನಾಡಿನ ವಿವಿಧ ಸ್ಪರ್ಧೆಗಳ ತುಳು ಮಕ್ಕಳ ರಸಮಂಟಮೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇವತ್ತು ವಿದೇಶದಲ್ಲಿ ಕೂಡಾ ತುಳು ಸಂಸ್ಕತಿ ಅನಾವರಣವಾಗುತ್ತಿದೆ. ತುಳು ಭಾಷೆಯ ಬೆಳವಣಿಗೆ ತುಳು ಸಂಸ್ಸತಿಯ ಉಳಿವಿಗೆ ತುಳು ಸಾಹಿತ್ಯ ಅಕಾಡೆಮಿಯು ಶ್ರಮಿಸುತ್ತಿದೆ. ತುಳುನಾಡಿನ ಮಣ್ಣಿನ ಸಂಸ್ಕೃತಿ, ಆಚರಣೆಗಳು ತುಳುವರ ಪ್ರತೀ ಮನೆಯಲ್ಲಿ ಹಾಗೂ ಮನದಲ್ಲಿ ಉಳಿಯಬೇಕು, ತುಳು ಭಾಷೆಯನ್ನು ಹೆಚ್ಚು ಹೆಚ್ಚು ಬಳಕೆ ಮಾಡಿ ತುಳು ಬೆಳವಣಿಗೆಗೆ ನಾವು ಕಾರಣರಾಗಬೇಕು, ಮುಂದಿನ ಪೀಳಿಗೆಗೆ ತುಳು ಭಾಷೆ ಉಳಿಯಬೇಕಾದರೆ ಇಂದಿನ ಮಕ್ಕಳಲ್ಲಿ ತುಳುವಿನ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ, ಈ ಹಿನ್ನೆಯಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಉದ್ದೇಶವನ್ನು ಈಡೇರಿಸುವಲ್ಲಿ ರಾಮಕುಂಜೇಶ್ವರ ಶಾಲೆ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದು ಹೇಳಿದ ಎ.ಸಿ ಭಂಡಾರಿ ತುಳು ಭಾಷಿಕರ ಜಿಲ್ಲೆಗಳ ಪ್ರತೀ ತಾಲೂಕಿನಲ್ಲಿ ತುಳು ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗುವುದು ಎಂದರು.

Also Read  ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ

ಮಂಗಳೂರು ತುಳುಕೂಟದ ಕಾರ್ಯದರ್ಶಿ ರತ್ನಕುಮಾರ್ ಎಂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಲ್ಲಿ ನಾವೆಲ್ಲರೂ ಶಕ್ತಿಮೀರಿ ಶ್ರಮಿಸಬೇಕು, ತುಳು ರಾಷ್ಟ್ರ ಭಾಷೆಯಾದರೆ ತುಳು ಸಂಸ್ಕತಿ, ಸಂಪ್ರದಾಯ ಆಚರಣೆಗಳಿ ಇನ್ನಷ್ಟು ಮಹತ್ವ ಸಿಗಲಿದೆ, ಕೇಂದ್ರ ಸರಕಾರಕ್ಕೆ ತುಳು ಭಾಷೆಯ ಅಭಿವೃದ್ಧಿಗೆ ಅನುದಾನ ಕೂಡಾ ದೊರೆಯಲಿದೆ ಎಂದರು.
ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ನಿರಂಜನ ರೈ ವ್ಮಠಂತಬೆಟ್ಟು, ಪುತ್ತೂರು ತುಳುಕೂಟದ ಅಧ್ಯಕ್ಷ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ಕಡಬ ಕದಂಬ ಸಿರಿ ತುಳು ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ, ಸವಣೂರು ಬೊಳ್ಳಿಬೊಳ್ಪು ತುಳುಕೂಟದ ಅಧ್ಯಕ್ಷ ಗಿರಿಶಂಕರ ಸುಲಾಯ, ನೂಜಿಬಾಳ್ತಿಲ ತೆಗರ್ ತುಳುಕೂಟದ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಮ್ ಅತಿಥಿಗಳಾಗಿ ಮಾತನಾಡಿದರು.

ವೇದಿಕೆಯಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಇ.ಕೃಷ್ಣಮೂರ್ತಿ ಕಲ್ಲೇರಿ, ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್, ನಿವೃತ್ತ ದೈಹಿಕ ಶಿಕ್ಷಕ ಗೋಪಾಲ ಶೆಟ್ಟಿ ಕಳೆಜ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಆಡಳಿತಾಧಿಕಾರಿ ಆನಂದ ಉಪಸ್ಥಿತರಿದ್ದರು. ಶಾಲಾ ಕಾರ್ಯದರ್ಶಿ ಸೇಸಪ್ಪ ರೈ ಪ್ರಸ್ತಾವನೆಗೈದರು. ಶಾಲಾ ಮುಖ್ಯಗುರು ಗಾಯತ್ರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಾ ವಂದಿಸಿದರು. ಶಿಕ್ಷಕಿ ಸವಿತಾ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿದ್ದ ಅತಿಥಿಗಳಿಗೆ ಬೆಲ್ಲ ನೀರು, ಅಡಕೆ ವೀಳ್ಯ ನೀಡಿ ಪಕ್ಕಾ ತುಳುನಾಡಿನ ಶೈಲಿಯಲ್ಲಿ ಸ್ವಾಗತಿಸಲಾಯಿತು. ಅತಿಥಿಗಳಿಗೆ ತೆಂಗಿನ ಕಾಯಿಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.

Also Read  ➤➤ Breaking News ಮಂಗಳೂರು: ಮಸೀದಿಯ ಒಳಗೆ ನುಗ್ಗಿದ ಕಾರು ➤ ಐವರಿಗೆ ಗಾಯ

ಕಾರ್ಯಕ್ರಮವನ್ನು ಸಭಿಕರಿಗೆ ತುಳು ಒಗಟನ್ನು ಹೇಳಿ ಉತ್ತರ ನೀಡಿದವರಿಗೆ ತೆಂಗಿನ ಕಾಯಿ ನೀಡುವ ಮೂಲಕ ವಿಶಿಷ್ಠವಾಗಿ ಉದ್ಘಾಟಿಸಲಾಯಿತು. ಉಭಯ ಜಿಲ್ಲೆಯ 40 ಶಾಲೆಗಳಲ್ಲಿ ತುಳು ಭಾಷೆ ಕಲಿಯುತ್ತಿರುವ 19,000 ಮಕ್ಕಳ ಪೈಕಿ ಎಲ್ಲಾ ಶಾಲೆಗಳಿಂದ ಆಯ್ದ 400 ಕ್ಕೂ ಹೆಚ್ಚು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವೇದಿಕೆಯನ್ನು ತುಳುನಾಡಿನ ಶೈಲಿಯಲ್ಲಿ ಅಲಂಕರಿಸಿ ಅದಕ್ಕೆ ತುಳುನಾಡ ವೀರಪುರುಷರಾದ ಕೋಟಿ ಚೆನ್ನಯ ರಂಗಮಂಟಮೆ ಛಾವಡಿ ಎಂದು ಹೆಸರಿಡಲಾಗಿತ್ತು. ವಿದ್ಯಾರ್ಥಿಗಳಿಗೆ ತುಳು ಜನಪದ ಗೀತೆ, ತುಳು ಯಕ್ಷಗಾನ, ತುಳು ನಾಟಕ, ತುಳು ಭಾವಗೀತೆ, ತುಳುಜನಪದ ಕಥೆ, ತುಳು ಭಾಷಣ, ತುಳು ಒಗಟು, ತುಳು ರಸಪ್ರಶ್ನೆ, ತುಳು ಗಾದೆ, ತುಳು ಏಕಪಾತ್ರಾಭಿನಯ, ತೆಂಗಿನ ಕರಕುಶಲು ವಸ್ತುಗಳ ತಯಾರಿ, ತುಳುವೆರೆ ಜೀವನ ಚಿತ್ರಕಲೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

error: Content is protected !!
Scroll to Top