ಬೆಳಂದೂರು: ಮೆಸ್ಕಾಂ ವತಿಯಿಂದ ಸಾರ್ವಜನಿಕ ಸಭೆ ► ಆಲಂಕಾರಿನಲ್ಲಿ 110 ಕೆ.ವಿ. ಉಪಕೇಂದ್ರದ ಸ್ಥಾಪನೆಯ ಸಾಧಕ – ಬಾಧಕಗಳ ಚರ್ಚೆ

(ನ್ಯೂಸ್ ಕಡಬ) newskadaba.com ಬೆಳಂದೂರು, ಜೂ.13. 110 ಕೆ.ವಿ. ವಿದ್ಯುತ್ ಪ್ರಸರಣಾ ಲೈನ್ ಎಳೆಯಲು ನಮ್ಮದೇನು ಆಕ್ಷೇಪವಿಲ್ಲ. ಆದರೆ, ಈ ಯೋಜನೆಯಿಂದ ಕೃಷಿಕರಿಗೆ ತೊಂದರೆಯಾಗಬಾರದು. ಯೋಜನೆಗೆ ಭೂಮಿ ನೀಡುವ ಕೃಷಿಕರಿಗೆ ಸೂಕ್ತ ಪ್ರಮಾಣದ ಪರಿಹಾರ ಮೊತ್ತವನ್ನು ಸಕಾಲಕ್ಕೆ ಪಾವತಿಸಬೇಕೆಂದು ಬೆಳಂದೂರಿನಲ್ಲಿ ನಡೆದ ಕವಿಪ್ರನಿನಿ ಸಭೆಯಲ್ಲಿ ಆಗ್ರಹ ಕೇಳಿಬಂತು.

ಬೆಳಂದೂರಿನ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ವತಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೃಷಿಕರು, ರೈತರ ಮೂಲಭೂತ ಬೇಡಿಕೆಗಳಲ್ಲಿ ಒಂದಾದ ವಿದ್ಯುತ್ ಪೂರೈಕೆಯಲ್ಲಿ ಉಂಟಾಗುವ ಸಮಸ್ಯೆ ಕುರಿತು ನಮಗೆ ಅರಿವಿದೆ. 110 ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಹೆಚ್ಟಿ ಲೈನ್ ಅಳವಡಿಸುವುದಕ್ಕೆ ನಮ್ಮದೇನು ವಿರೋಧವಿಲ್ಲ. ಆದರೆ, ಇದಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಪಾರದರ್ಶಕವಾಗಿ ನಮ್ಮ ಮುಂದಿಡಬೇಕು. ಸಂತ್ರಸ್ಥರಿಗೆ ಪರಿಹಾರ ಹಣವನ್ನು ಮುಂಚಿತವಾಗಿ ನೀಡಬೇಕು ಎಂದರು.
ಯೋಜನೆ ಕುರಿತು ಮಾಹಿತಿ ನೀಡಿದ ಕವಿಪ್ರನಿನಿಯ ಬೃಹತ್ ಕಾಮಗಾರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಸತೀಶ್, ವಿದ್ಯುತ್ ಉಪಕೇಂದ್ರ ಸ್ಥಾಪನೆ ನಿಟ್ಟಿನಲ್ಲಿ ಈ ಭಾಗದ ಕೃಷಿಕರ ಸಹಕಾರ ಅಗತ್ಯವಾಗಿ ಬೇಕಾಗಿದೆ. ಯೋಜನೆಯಿಂದ ಇಲ್ಲಿನ ಪಂಪ್ಸೆಟ್ ಹಾಗೂ ಗೃಹಬಳಕೆಯ ವಿದ್ಯುತ್ನಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಬಹುದು. ವಿದ್ಯುತ್ ಲೈನ್ ಹಾದು ಹೋಗುವ ಕೃಷಿಭೂಮಿಗೆ ನಿಗಮದಿಂದ ಸೂಕ್ತ ಪರಿಹಾರ ದೊರೆಯುವುದು ಎಂದರು.

 


ಈ ವೇಳೆ ಮಾತನಾಡಿದ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಧರ್ಣಪ್ಪ ಗೌಡ ಇಡ್ಯಾಡಿ ಅವರು ಯೋಜನೆ ಅನುಷ್ಠಾನಗೊಳ್ಳುವುದು ಉತ್ತಮ ವಿಚಾರವೇ. ಅದಕ್ಕೆ ನಮ್ಮ ಸಹಕಾರವೂ ಇದೆ. ಆದರೆ ಸಂಸ್ರಸ್ಥ ಕೃಷಿಕರಿಗೆ ಯಾವ ಪ್ರಮಾಣದಲ್ಲಿ ಪರಿಹಾರ ಮೊತ್ತ ನೀಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.
ಪ್ರತಿಕ್ರಿಯಿಸಿದ ಸತೀಶ್ ವೈಜ್ಞಾನಿಕ ರೀತಿಯಲ್ಲಿಯೇ ತೋಟಗಾರಿಕಾ ಇಲಾಖಾ ಅಧಿಕಾರಿಗಳ ನಿರ್ದೇಶನದಂತೆ ಬೆಳೆಗಳಿಗೆ ಬೆಲೆ ನಿಗದಿ ಮಾಡಲಾಗುತ್ತದೆ. ಒಂದು ತೆಂಗಿನ ಮರಕ್ಕೆ ಅಂದಾಜು 10ರಿಂದ 13 ಸಾವಿರ ರೂ., ರಬ್ಬರ್ ಗಿಡಕ್ಕೆ 12 ಸಾವಿರ ರೂ. ದೊರೆಯಲಿದೆ ಎಂದರು. ತೋಟಗಾರಿಕೆಯ ಎಲ್ಲ ಬೆಳೆಗಳಿಗೂ ಹಣ ಸಿಗಲಿದೆ ಎಂದರು.

ಕೃಷಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ _ ಧರ್ಣಪ್ಪ ಗೌಡ
ಕುಂಬ್ರದಲ್ಲಿ ಹೆಚ್ಟಿ ಲೈನ್ ಎಳೆಯುವ ಸಂದರ್ಭ ನೀವು ಘೋಷಿಸಿದ ಪರಿಹಾರ ಮೊತ್ತ ಅಲ್ಲಿ ಭೂಮಿ ಕಳಕೊಂಡ ಕೃಷಿಕರಿಗೆ ಇನ್ನೂ ಸಿಕ್ಕಿಲ್ಲ. ಅದಕ್ಕಾಗಿ ಸಾಕಷ್ಟು ಕಾನೂನು ಹೋರಾಟವೇ ನಡೆದಿದೆ. ರೈತ ಸಂಘವು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅಂದಿನ ಡಿಸಿಯವರನ್ನೂ ಸಂಪಕರ್ಿಸಿತ್ತು. ಡಿಸಿ ಆದೇಶಕ್ಕೂ ಕೆಪಿಟಿಸಿಎಲ್ ಅಧಿಕಾರಿಗಳು ಕಿಮ್ಮತ್ತಿನ ಬೆಲೆ ಕೊಟ್ಟಿಲ್ಲ. ಪರಿಹಾರ ಪಾವತಿಸಿಯೇ ಕಾಮಗಾರಿ ಪ್ರಾರಂಭಿಸಿ. ಯೋಜನೆ ಹೆಸರಲ್ಲಿ ಬಡ ಕೃಷಿಕರಿಗೆ ಯಾವ ರೀತಿಯಲ್ಲೂ ಅನ್ಯಾಯವಾಗಬಾರದು. ಅದಕ್ಕೆ ನಾವು ಆಸ್ಪದವೂ ಕೊಡುವುದಿಲ್ಲ ಎಂದು ಎಚ್ಚರಿಸಿದರು.

ಸರ್ವೆ ಮಾಡುವ ಮುಂಚೆ ಯಾಕೆ ತಿಳಿಸಿಲ್ಲ ?
ಈಗಾಗಲೇ ಕೆಪಿಟಿಸಿಎಲ್ನವರು ಸರ್ವೆ ಕಾರ್ಯ ಮುಗಿಸಿರುತ್ತೀರಿ. ಸೌಜನ್ಯಕ್ಕೂ ನಮ್ಮ ಗಮನಕ್ಕೆ ತಂದಿಲ್ಲ. ಮುಂದಿನ ದಿನಗಳಲ್ಲಿ ಅಧಿಕಾರಿಗಳೆಂಬ ದರ್ಪದಿಂದ ಕಾರ್ಯಕ್ಕಿಳಿದರೆ ನಾವು ಸುಮ್ಮನಿರುವುದಿಲ್ಲ. ಯೋಜನೆ ಕುರಿತ ಎಲ್ಲ ವಿಚಾರವನ್ನು ನಮ್ಮ ಗಮನಕ್ಕೆ ತನ್ನಿ ಎಂದು ದಾಮೋದರ್ ಬರೆಪ್ಪಾಡಿ ಹೇಳಿದರು. ರತನ್ ಕಾರ್ಲಾಡಿ ಮಾತನಾಡಿ, ಹೆಚ್ಟಿ ಲೈನ್ ಹಾದು ಹೋದ ಜಾಗ ಕನ್ವರ್ಷನ್ ಕೂಡ ಮಾಡಕ್ಕಾಗಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸೂಕ್ತ ಪರಿಹಾರ ಒದಗಿಸಿ
ಸಾಮಾಜಿಕ ಮುಂದಾಳು ಜನಾರ್ದನ ಆಚಾರ್ಯ ಕಾಣಿಯೂರು ಮಾತನಾಡಿ, ಕೃಷಿಕರಿಗೆ ಸರಿಯಾದ ಮಾಹಿತಿ ನೀಡಬೇಕು. ಪರಿಹಾರವೂ ಶೀಘ್ರವಾಗಿ ದೊರಕಿಸಿಕೊಡಬೇಕು. ಅಧಿಕಾರಿಗಳು ಕೃಷಿಕರೊಂದಿಗೆ ಸೌಜನ್ಯದಿಂದ ಮುಂದುವರಿಯಬೇಕೆಂದರು. ರ್ಯತ ಸಂಘದ ಹೊನ್ನಪ್ಪ ಗೌಡ, ಬೆಳಂದೂರು ಗ್ರಾಪಂ ಮಾಜಿ ಅಧ್ಯಕ್ಷ ವಿಠಲ್ ಗೌಡ ಅಗಳಿ, ತನಿಯಪ್ಪ ಕಾರ್ಲಾಡಿ ಮೊದಲಾದವರು ತಮ್ಮ ಅಭಿಪ್ರಾಯಗಳನ್ನು ಅಧಿಕಾರಿಗಳ ಮುಂದಿಟ್ಟರು.

ವಿಳಂಬ ನೀತಿ ಅನುಸರಿಸಬೇಡಿ
ಆಲಂಕಾರು ಗ್ರಾಪಂ ಉಪಾಧ್ಯಕ್ಷ ಸುಧಾಕರ್ ಪೂಜಾರಿ ಮಾತನಾಡಿ, ಗುಣಮಟ್ಟದ ವಿದ್ಯುತ್ ಪಡೆಯುವ ನಿಟ್ಟಿನಲ್ಲಿ ಉಪಕೇಂದ್ರ ಸ್ಥಾಪನೆಯಾಗಲೇಬೇಕು. ಹೆಚ್ಟಿ ಲೈನ್ ಯಾರ ಜಾಗದಲ್ಲಿ ಹಾದು ಹೋಗುವುದೋ ಅಂತವರನ್ನು, ಸಂಬಂಧಪಟ್ಟ ಜನಪ್ರತಿನಿಧಿ, ಊರ ಪ್ರಮುಖರನ್ನು ಸೇರಿಸಿ, ಮೆಸ್ಕಾಂನವರು ಸಭೆ ನಡೆಸಬೇಕು. ಸಮರ್ಪಕವಾದ ಮಾಹಿತಿ ನೀಡುವ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಗೊಂಡು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಆಲಂಕಾರಿನಲ್ಲಿ ಸಬ್ಸ್ಟೇಷನ್ ನಿರ್ಮಾಣಕ್ಕೆಂದು ಮೂರು ವರ್ಷಗಳ ಹಿಂದೆಯೇ ಭೂಮಿ ನೀಡಲಾಗಿತ್ತು. ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಅನಗತ್ಯವಾಗಿ ಅಡೆತಡೆಗಳು ತಲೆದೋರುತ್ತಿವೆ ಎಂದರು.

ಮೆಸ್ಕಾಂನಿಂದ ಗೋಲ್ ಮಾಲ್
ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಅಳವಡಿಸುವ ಮೀಟರ್ಗೆ 60 ಸಾವಿರ ರೂ. ವೆಚ್ಚವೆಂದು ಮೆಸ್ಕಾಂ ತಿಳಿಸಿದೆ. ಆದರೆ ಅದರ ನೈಜ ಬೆಲೆ ಕೇವಲ 20 ಸಾವಿರ ರೂ. ಯೋಜನೆಯ ದುರುಪಯೋಗದ ಮೂಲಕ ಕೆಲವೊಂದು ಅಧಿಕಾರಿಗಳು ಸಾಕಷ್ಟು ಹಣ ಮಾಡಿಕೊಂಡಿದ್ದಾರೆ. ಪುತ್ತೂರು ವಿದ್ಯುತ್ ಕೇಂದ್ರದಿಂದ ಸವಣೂರು ಸಬ್ ಸ್ಟೇಷನ್ಗೆ ಸರಬರಾಜಗುತ್ತಿದ್ದ ವಿದ್ಯುತ್ನಲ್ಲಿ ಇದೀಗ ಪ್ರತಿಷ್ಠಿತ ಖಾಸಗಿ ಕಂಪನಿ ಬಿಂದುವಿಗೆ ನೀಡಲಾಗುತ್ತಿದೆ. ಮೆಸ್ಕಾಂನ ಕೆಲ ಅಧಿಕಾರಿಗಳಿಗೆ ಇದರಿಂದ ಲಾಭವಾಗಿರಬಹುದು. ಆದರೆ ಬಡ ಕೃಷಿಕರಿಗೆ ಇದರಿಂದ ವೋಲ್ಟೇಜ್ ಸಮಸ್ಯೆ ಉಂಟಾಗಿದೆ ಎಂದು ಧರ್ಣಪ್ಪ ಗೌಡ ಆರೋಪಿಸಿದರು.

ಕವಿಪ್ರನಿನಿಯ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಗಂಗಾಧರ್ ಮಾತನಾಡುತ್ತ, ವಿಥ್ ಆರ್ ವಿಥೌಟ್ ಪಮರ್ಿಷನ್ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳುತ್ತಿದ್ದಂತೆ, ಏನು ನಮ್ಮನ್ನು ಕಾನೂನು ಅಂಥ ಹೆದರಿಸಿ, ಸರ್ವೆ ಕಾರ್ಯಕ್ಕೆ ಮುಂದಾಗುತ್ತೀರಾ ? ಪೊಲೀಸ್ ಸಮ್ಮುಖದಲ್ಲಿ ಸರ್ವೆ ಮಾಡುವುದಾದರೆ ಮಾಡಿ ನೋಡೋಣ ! ಇಂತಹ ಉದ್ದಟತನ ದ.ಕ. ಜಿಲ್ಲೆಯಲ್ಲಿ ಇಟ್ಟುಕೊಳ್ಳಬೇಡಿ, ಕೃಷಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತ್ರ ಮುಂದುವರಿಯಿರಿ ಎಂದು ಧರ್ಣಪ್ಪ ಗೌಡ ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮೀಳಾ ಜನಾರ್ದನ, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಕೆ., ಸದಸ್ಯರಾದ ಲಲಿತಾ ಈಶ್ವರ, ತಾರಾ ಬಿ., ಬೆಳಂದೂರು ಗ್ರಾಪಂ ಅಧ್ಯಕ್ಷೆ ಉಮೇಶ್ವರಿ ಅಗಳಿ, ಆಲಂಕಾರು ಗ್ರಾಪಂ ಅಧ್ಯಕ್ಷೆ ಸುನಂದಾ ಬಾರ್ಕುಳಿ, ಪುತ್ತೂರು ಮೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಎಂಜಿನೀಯರ್ ನರಸಿಂಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕವಿಪ್ರನಿನಿ ಬೃಹತ್ ಕಾಮಗಾರಿ ವಿಭಾಗದ ಸಹಾಯಕ ಎಂಜಿನೀಯರ್ ಬಸವರಾಜ್, ಸವಣೂರು ಮೆಸ್ಕಾಂ ಶಾಖಾಧಿಕಾರಿ ನಾಗರಾಜ್, ವಿನೋದ್ ಕುಮಾರ್ ಸಹಕರಿಸಿದರು.
ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಪ್ರಶಾಂತ್ ಪೈ ಸ್ವಾಗತಿಸಿ, ಸಭೆ ನಿರ್ವಹಿಸಿದರು.

error: Content is protected !!

Join the Group

Join WhatsApp Group