ಕಡಬ: ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರಮಾಣವಚನ ಸ್ವೀಕಾರ

(ನ್ಯೂಸ್ ಕಡಬ) newskadaba,ಜು.05. ವಿದ್ಯಾರ್ಥಿ ಜೀವನ ತುಂಬ ಮುಖ್ಯವಾದುದು, ಈ ಸಂದರ್ಭದಲ್ಲಿ ನಾವು ಸಮಯದ ಸದುಪಯೋಗ ಮಾಡಿಕೊಳ್ಳಬೇಕು. ಅದೇ ರೀತಿ ವಿದ್ಯಾರ್ಥಿ ಸಂಘಗಳು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣವನ್ನು ಬೆಳೆಸಿ ಅವರು ಸಮಾಜ ಸೇವೆಯನ್ನು ಮಾಡಲು ಇದು ಬುನಾದಿಯಾಗುತ್ತದೆ ಎಂದು ಕಡಬದ ಸರಸ್ವತೀ ವಿದ್ಯಾಲಯ ಪ್ರೌಢ ಹಾಗೂ ಪದವಿಪೂರ್ವ ವಿಭಾಗಗಳ ವಿದ್ಯಾರ್ಥಿ ಸಂಘ ಉದ್ಘಾಟನೆಯನ್ನು ನೆರವೇರಿಸಿದ ನಿವೃತ ದೈಹಿಕ ಶಿಕ್ಷಣ ಶಿಕ್ಷಕರಾದ ವೀರಮ್ಮ ಇವರು ಹೇಳಿದರು. ವಿದ್ಯಾರ್ಥಿಗಳು ತಮ್ಮ ಈ ವಯಸ್ಸಿನಲ್ಲಿ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಯಾಕೆಂದರೆ ಒಳ್ಳೆಯ ಮತ್ತು ಕೆಟ್ಟ ವಿಷಯಗಳು ಕಣ್ಣ ಮುಂದಿರುತ್ತವೆ, ಆಯ್ಕೆ ಮತ್ತು ಗುರಿ ನಮ್ಮದಾಗಿರುತ್ತದೆ ಎಂಬುದಾಗಿ ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪದವಿಪೂರ್ವ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರು, ವಿದ್ಯಾಭಾರತಿ ದ.ಕ ಜಿಲ್ಲಾ ಶಾರೀರಕ ಪ್ರಮುಖ್ ಆಗಿರುವ ಶ್ರೀ ಕರುಣಾಕರ್ ಇವರು ಮಾತನಾಡಿ ವಿದ್ಯಾಸಂಸ್ಥೆ ಅಂದರೆ ಇಲ್ಲಿ ಶಿಸ್ತಿಗೆ ಪ್ರಮುಖ ಆದ್ಯತೆ, ಶಾಲೆಯ ನೀತಿ ನಿಯಮಗಳಿಗೆ ಬದ್ಧರಾಗಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಅನುಶಾಸನ ತುಂಬಾ ಮುಖ್ಯ ಅದೇ ರೀತಿ ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಿ. ನಮ್ಮ ಜೀವನ ಕ್ರಮ ಸರಿಯಾದ ರೀತಿಯಲ್ಲಿದ್ದರೆ ನಮ್ಮ ಭವಿಷ್ಯವು ಉತ್ತಮವಾಗಿರುತ್ತದೆ ಎಂದು ಅವರು ಹೇಳಿದರು.

ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಆಡಳಿತಮಂಡಳಿ ಸದಸ್ಯರಾದ ಪುಲಸ್ತ್ಯಾರೈ ಇವರು ಉತ್ತಮ ನಾಯಕತ್ವ ಗುಣಮಟ್ಟವನ್ನು ಬೆಳೆಸಿಕೊಂಡಾಗ ಪ್ರಪಂಚವನ್ನೇ ಬದಲಿಸುವಂತಹ ಪ್ರಜೆಗಳಾಗಬಹುದು,ಜಗತ್ತಿನ ಕತ್ತಲೆಯನ್ನು ಹೋಗಲಾಡಿಸುವ ಅಗಾಧಶಕ್ತಿ ವಿದ್ಯಾರ್ಥಿಗಳಲ್ಲಿದೆ ಎಂದರು.
ವೇದಿಕೆಯಲ್ಲಿ ಪದವಿಪೂರ್ವ ವಿಭಾಗದ ಮುಖ್ಯಸ್ಥರಾದ ಮಹೇಶ್ ನಿಟಿಲಾಪುರ ಮತ್ತು ಪ್ರೌಢ ವಿಭಾಗದ ಮುಖ್ಯಸ್ಥರಾದ ಶೈಲಶ್ರೀ ರೈ ಎಸ್ ಉಪಸ್ಥಿತರಿದ್ದರು. ಶಿಕ್ಷಕಿ ಸುಪ್ರೀಯಾ ಮತ್ತು ಉಪನ್ಯಾಸಕರಾದ ನಾಗರಾಜ್ ಇವರು ಪ್ರೌಢ ಹಾಗೂ ಪದವಿಪೂರ್ವ ವಿಭಾಗಗಳ ಚುನಾವಣಾ ವರದಿಯನ್ನು ಮಂಡಿಸಿದರು, ಬಳಿಕ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ತಮಗೆ ನೀಡಿದ ಜವಬ್ಧಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೆವೆಂದು ಪ್ರಮಾಣವಚನ ಮಾಡಿದರು. ಇದನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ್ಮೀಶ ಗೌಡ ನಿರ್ವಹಿಸಿದರು.
ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಮುಖ್ಯಗುರುಗಳಾದ ಶೈಲಶ್ರೀ ರೈ ಎಸ್ ವಂದಿಸಿದರು, ವಿದ್ಯಾರ್ಥಿ ಸಿಂಧುಶ್ರೀ ದ್ವಿತೀಯ ಪಿಯುಸಿ ಕಾರ್ಯಕ್ರಮ ನಿರೂಪಿಸಿದರು.

 

error: Content is protected !!

Join the Group

Join WhatsApp Group