ಕಡಬ: ರಿಕ್ಷಾ ಚಾಲಕನಿಗೆ ಇರಿದ ಪ್ರಕರಣ ► ಮಹಿಳೆ ಸೇರಿ ಇಬ್ಬರ ಬಂಧನ, ತಲವಾರು ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಮೇ.15. ಠಾಣಾ ವ್ಯಾಪ್ತಿಯ ನೆಕ್ಕಿತ್ತಡ್ಕ ಎಂಬಲ್ಲಿ ರಿಕ್ಷಾ ಚಾಲಕನೋರ್ವನನ್ನು ಇರಿದು ಕೊಲೆಗೆ ಯತ್ನಿಸಿದ ಪ್ರಕರಣವನ್ನು ಭೇದಿಸಿರುವ ಕಡಬ ಪೊಲೀಸರು ಕೃತ್ಯಕ್ಕೆ ಬಳಸಿದ ಮಾರಕಾಯುಧಗಳೊಂದಿಗೆ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಳ್ಯಕಾಡು ನಿವಾಸಿ ಚಂದ್ರಹಾಸ ಎಂಬವರ ಪತ್ನಿ ಕುಸುಮಾವತಿ(38) ಹಾಗೂ ಬೆಳ್ತಂಗಡಿ ತಾಲೂಕಿನ ನಿಡ್ಲೆ ನಿವಾಸಿ ಚಿನ್ನಕೇಶವ ಪೂಜಾರಿ ಎಂಬವರ ಪುತ್ರ ಸುಬ್ಬು ಯಾನೆ ಸುಬ್ರಮಣ್ಯ ಎಂದು ಗುರುತಿಸಲಾಗಿದೆ. ಇರಿತಕ್ಕೊಳಗಾದ ರಿಕ್ಷಾ ಚಾಲಕ ಐತ್ತೂರು ಗ್ರಾಮದ ಕೇನ್ಯ ನಿವಾಸಿ ಉಮೇಶ್ ಈ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದು, ಆ ಬಳಿಕವೂ ಯುವತಿಯ ಜೊತೆ ಸಂಪರ್ಕವಿದೆ ಎಂಬ ಶಂಕೆಯ ಮೇರೆಗೆ ಆರೋಪಿಗಳು ಭಾನುವಾರದಂದು ಹಾಡುಹಗಲೇ ನೆಕ್ಕಿತ್ತಡ್ಕ ದರ್ಗಾ ಬಳಿ ಉಮೇಶ್ ನನ್ನು ಇರಿದು ಪರಾರಿಯಾಗಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಧರ್ಮಸ್ಥಳದ ಪುದುವೆಟ್ಟು ಎಂಬಲ್ಲಿ ಮಂಗಳವಾರದಂದು ಬೆಳಿಗ್ಗೆ ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೋರ್ವ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ.

error: Content is protected !!

Join the Group

Join WhatsApp Group