ಸುಬ್ರಹ್ಮಣ್ಯ ಪ್ರಾಧಿಕಾರ ರಚನೆ ವಿರೋಧಿಸಿ ಮಾ. 19ಕ್ಕೆ ನಿರ್ಣಾಯಕ ಸಭೆ: ಹೋರಾಟ ತೀವ್ರಗೊಳಿಸಲು ನಿರ್ಧಾರ



(ನ್ಯೂಸ್‌ ಕಡಬ) newskadaba.com,ಮಾ.19   ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾಪಕ್ಕೆ ಸುಬ್ರಹ್ಮಣ್ಯದಲ್ಲಿ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಲು ಸಭೆಗಳನ್ನು ನಡೆಸಿ ನಿರ್ಧಾರ ಕೈಗೊಂಡಿದ್ದಾರೆ. ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿ ಸುಬ್ರಹ್ಮಣ್ಯದ ಪ್ರಮುಖರು ಮಂಗಳವಾರ ಸುಬ್ರಹ್ಮಣ್ಯದ ಗ್ರಾಮ ಪಂಚಾಯತ್‌ನ ಕುಮಾರಧಾರ ಸಭಾಭವನದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ವ್ಯಾಪಾರಸ್ಥರು, ವಸತಿಗ್ರಗಳ ಮಾಲಕರು, ಸಂಘ-ಸಂಘ ಸಂಸ್ಥೆ ಪ್ರಮುಖರು, ಗ್ರಾಮಸ್ಥರು ಭಾಗವಹಿಸಿದ್ದರು. ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಸ್ಟರ್ ಪ್ಲಾನ್ ಸಮಿತಿ ಅಡಿಯಲ್ಲಿ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆದು, ಅಭಿವೃದ್ಧಿ ಹಂತದಲ್ಲಿದೆ. ಇನ್ನೂ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆ ಕ್ಯಾಬಿನೆಟ್ ಹಂತದಲ್ಲಿದೆ..





ಆದ್ದರಿಂದ ಮಾಸ್ಟರ್ ಪ್ಲಾನ್ ಸಮಿತಿ ಇರುವಾಗಲೇ ಇನ್ನೊಂದು ಅಭಿವೃದ್ಧಿ ಪ್ರಾಧಿಕಾರ ಇಲ್ಲಿಗೆ ಬೇಕಾಗಿಲ್ಲ ಎಂದು ಗ್ರಾಮಸ್ಥರೋರ್ವರು ಪ್ರಸ್ತಾಪಿಸಿದರು. ಈಗಾಗಲೇ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವುದರಿಂದ, ಪ್ರಾಧಿಕಾರ ರಚನೆಯ ಪ್ರಕ್ರಿಯೆ, ಅದರ ರಚನೆ ಆಗುವ ಮೊದಲು ನಮ್ಮ ಹೋರಾಟಗಳು ತಿಂಗಳೊಳಗೆ ನಡೆದು ನಮ್ಮ ವಿರೋಧವನ್ನು ಸರಕಾರದ ಮಟ್ಟಕ್ಕೆ ತಿಳಿಸಿ ಪ್ರಾಧಿಕಾರ ರಚನೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಿವರಾಮ ಪ್ರಸ್ತಾಪಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚನೆಯಾದಲ್ಲಿ ಮುಖ್ಯಮಂತ್ರಿ ಅಥವಾ ಸಚಿವರು ಅಧ್ಯಕ್ಷರಾಗಲಿದ್ದು, ಐಎಎಸ್ ಹಂತದ ಅಧಿಕಾರಿಗಳು ಅಧಿಕಾರಿಯಾಗಲಿದ್ದಾರೆ. ಇವರು ಸ್ಥಳೀಯವಾಗಿ ಸಾರ್ವಜನಿಕರ ಭೇಟಿಗೆ ಸಿಗಲು ಕಷ್ಟವಾಗಬಹುದು. ಅಲ್ಲದೇ ಪ್ರಾಧಿಕಾರ ಆದಲ್ಲಿ ಸ್ಥಳೀಯ ಯಾವುದೇ ಕುಂದು-ಕೊರತೆಗಳಿಗೆ ಉನ್ನತ ಮಟ್ಟದ ಅಧಿಕಾರಿಗಳನ್ನೇ ಆಶ್ರಯಿಸಬೇಕಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಲಿದ್ದಾರೆ ಎಂದು ಅಭಿಪ್ರಾಯ ಪ್ರಸ್ತಾಪಗೊಂಡಿತು.






ಅಭಿವೃದ್ಧಿ ಪ್ರಾಧಿಕಾರ ರಚನೆಯಾದಲ್ಲಿ ಇಲ್ಲಿ ಲೈಸನ್ಸ್, ಕಟ್ಟಡ ನಿರ್ಮಾಣ ಮುಂತಾದ ಹಲವು ನಿತ್ಯ ಚಟುವಟಿಕೆಗಳ ಅನುಮತಿ ಪಡೆಯುವ ಮತ್ತಿತರ ನಿಯಮಾವಳಿಗಳೂ ಬದಲಾಗಿ, ಕಠಿಣ ನಿಯಮಗಳು ಜಾರಿಯಾದಲ್ಲಿ ಅದನ್ನು ಇಲ್ಲಿನ ಜನರು ಅನುಭವಿಸಬೇಕಾಗುತ್ತದೆ. ಇದು ಜನತೆಗೆ ಮತ್ತೊಂದು ಸವಾಲಾಗಲಿದೆ ಎಂದು ವ್ಯಕ್ತಿಯೋರ್ವರು ಪ್ರಸ್ತಾಪಿಸಿ ಪ್ರಾಧಿಕಾರಕ್ಕೆ ವಿರೋಧ ವ್ಯಕ್ತಪಡಿಸಿದರು.

ಮಾ.19ರಂದು ಹೋರಾಟದ ಬಗ್ಗೆ ಸಭೆ : ಸಭೆಯಲ್ಲಿ ಪ್ರಾಧಿಕಾರ ರಚನೆಗೆ ತೀವ್ರ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿ, ಸಭೆಯಲ್ಲಿ ಭಾಗವಹಿಸಿದ್ದರು, ಅಭಿಪ್ರಾಯ ವ್ಯಕ್ತಪಡಿಸಿದರು. ಮಾ.19ರಂದು ಇನ್ನೊಂದು ಸುತ್ತಿನ ಸಾರ್ವಜನಿಕ ಸಭೆ ನಡೆಸಿ ಮುಂದಿನ ಹೋರಾಟ ನಡೆಸುವ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸೋಣ ಎಂದು ಸಭೆಯಲ್ಲಿ ಚರ್ಚಿಸಿ, ನಿರ್ಧಾರಕೈಗೊಳ್ಳಲಾಯಿತು. ಈ ಹಿನ್ನಲೆಯಲ್ಲಿ ಪ್ರಾಧಿಕಾರ ರಚನೆಯ ವಿರೋಧ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಪ್ರಮುಖರಾದ ಶಿವರಾಮ ರೈ, ರವೀಂದ್ರ ಕುಮಾರ್ ರುದ್ರಪಾದ, ರಾಜೇಶ್ ಎನ್.ಎಸ್., ಪವನ್ ಕುಮಾರ್ ಎಂ.ಡಿ, ಎಚ್.ಎಲ್ ವೆಂಕಟೇಶ್, ದಿನೇಶ್, ಸುಬ್ರಹ್ಮಣ್ಯ ರಾವ್, ರವೀಂದ್ರ ಸುಬ್ರಹ್ಮಣ್ಯ, ಶೇಖರ ಬಿಲದ್ವಾರ, ವೆಂಕಟೇಶ್ ಶರ್ಮ, ಭವಿಷ್ ಅಯ್ಯೆಟ್ಟಿ, ಅನಿಲ್ ಡಿ. ಸೋಜಾ, ಕಾರ್ತಿಕ್ ಕಾಮತ್, ಭರತ್ ದೇವರಗದ್ದೆ, ಶೇಷಕುಮಾರ್, ದೀಪಕ್, ಸತೀಶ್ ಕೂಜುಗೋಡು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!
Scroll to Top