ತಾಯಿ ಭಾಷೆಯನ್ನು ಪ್ರೀತಿಸಿದಾಗ ಬದುಕು ಸುಂದರ – ಯು. ರಾಮರಾವ್



(ನ್ಯೂಸ್ ಕಡಬ) newskadaba.com ಮಾ. 15. ನಮ್ಮ ತಾಯಿ ಭಾಷೆ ನಮ್ಮ ಅಮ್ಮನಂತೆ ಪೂಜ್ಯನೀಯ. ಅದನ್ನು ಪ್ರೀತಿಸುತ್ತಾ ಬದುಕುವುದು ಸಂತಸ ಮತ್ತು ನೆಮ್ಮದಿ ನೀಡುತ್ತದೆ ಎಂದು ರೇಡಿಯೋ ಕೇಳುಗರ ಸಂಘದ ಸ್ಥಾಪಕಾಧ್ಯಕ್ಷ ಹಾಗೂ ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಅಧ್ಯಕ್ಷ  ಯು. ರಾಮರಾವ್ ಹೇಳಿದರು.





ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು – ಮಂಗಳೂರು ತಾಲೂಕು ಘಟಕ ಅವರ ಮನೆಗೆ ಭೇಟಿ ನೀಡಿ ಗೌರವಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಆಂಟಿ- ಅಂಕಲ್ ಬೇಡ ; ಅತ್ತೆ- ಮಾವ, ಚಿಕ್ಕಮ್ಮ- ಚಿಕ್ಕಪ್ಪ, ಅಣ್ಣ- ತಮ್ಮ, ಭಾವ ಎನ್ನುವ ಭಾವದಲ್ಲಿ ಹೃದಯದ ಪ್ರೀತಿ ಅರಳುತ್ತದೆ ಎಂದರು.






ರೇಡಿಯೋ ಕೇಳುಗರ ಸಂಘದ ಉದ್ಘಾಟನೆ ಮಾಡಿದ ಅಮೃತ ಸೋಮೇಶ್ವರರು ಆಕಾಶವಾಣಿಯು ನಮ್ಮ ಮಿತ್ರ, ತತ್ವಬೋಧಕ ಮತ್ತು ಮಾರ್ಗದರ್ಶಕ ಎಂದಿದ್ದರು. ಸಂಘದ ಕಾರ್ಯಕ್ರಮಕ್ಕೆ ಶಿವರಾಮ ಕಾರಂತರು, ಕು.ಶಿ. ಹರಿದಾಸ ಭಟ್ಟರು ಮುಂತಾದ ಖ್ಯಾತನಾಮರು ಬಂದಿದ್ದನ್ನು ನೆನಪಿಸಿಕೊಂಡರು. ತಮಿಳು ಭಾಷೆಯನ್ನೋದಿದ ರಾಮರಾಯರು ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಪ್ರೀತಿಸುತ್ತಾ ರೇಡಿಯೋ ಕೇಳುಗರ ಸಂಘವನ್ನು ಕಟ್ಟಿ ಬೆಳೆಸಿದ ಪರಿಯನ್ನು ಕಾರ್ಯದರ್ಶಿ ಡಾ.ಮುರಲೀಮೋಹನ್ ಚೂಂತಾರು ಕೊಂಡಾಡಿದರು.

ಮುಖ್ಯ ಅತಿಥಿಯಾಗಿದ್ದ ಹೊಸ ದಿಗಂತ ಸಂಪಾದಕ ಪ್ರಕಾಶ್ ಇಳಂತಿಲ ಆಕಾಶವಾಣಿ ಪದ ಮತ್ತು ಇತಿಹಾಸದ ಬಗ್ಗೆ ವಿವರಿಸುತ್ತಾ ರಾಮರಾಯರಂತಹ ಎಲೆ ಮರೆಯ ಸಾಧಕರನ್ನು ಗುರುತಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ  ಇವರ ಕುಟುಂಬ ದೊಡ್ಡ ದಾನದ ಪರಂಪರೆ ಹೊಂದಿದೆ ಎಂದು ನುಡಿದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ ರೇವಣ್ಕರ್, ರಾಮರಾವ್ ಹಾಗೂ ಸಾವಿತ್ರಿ ರಾಮರಾವ್ ದಂಪತಿಯನ್ನು ಸನ್ಮಾನಿಸಿ ಅಭಿನಂದನೆಯ  ಮಾತುಗಳನ್ನಾಡಿದರು.

error: Content is protected !!
Scroll to Top