ಗಂಗೊಳ್ಳಿ: ಸಮುದ್ರದಲ್ಲಿ ಬೋಟ್ ಮುಳುಗಡೆ; ಸಮಯಪ್ರಜ್ಞೆಯಿಂದ ಮೀನುಗಾರರ ಪ್ರಾಣಾಪಾಯ ಮುಕ್ತ



(ನ್ಯೂಸ್‌ ಕಡಬ) newskadaba.com,ಫೆ.27: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಬೋಟೊಂದು ನೀರು ತುಂಬಿ ಮುಳುಗಡೆ ಯಾದ ಘಟನೆ ಕುಂದಾಪುರ ಹಾಗೂ ಗಂಗೊಳ್ಳಿ ಮಧ್ಯದ ಸಮುದ್ರದಲ್ಲಿ ಸಂಭವಿಸಿದ್ದು, ಬೋಟಿನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟಿನ ಮೀನುಗಾರರು ರಕ್ಷಿಸಿದ್ದಾರೆ.





ಬೋಟಿನಲ್ಲಿದ್ದ ಮೀನುಗಾರರಾದ ಕುಮಟಾ ಮೂಲದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಹಾಗೂ ಶ್ರೀನಿವಾಸ ಪಾರಾದವರು. ಫೆ.23ರ ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಕೆಮ್ಮಣ್ಣಿನ ನಾಗರಾಜ್ ಪುತ್ರನ್ ಅವರ ಶ್ರೀದುರ್ಗಾಪರಮೇಶ್ವರಿ ಬೋಟಿನ ಅಡಿಭಾಗಕ್ಕೆ ಫೆ.24ರಂದು ಸಮುದ್ರದಲ್ಲಿ ಯಾವುದೋ ವಸ್ತು ತಾಗಿ, ಎಂಜಿನಿನ ಅಡಿ ಭಾಗದಲ್ಲಿ ನೀರು ಒಳ ಬರಲು ಆರಂಭಿಸಿತ್ತು. ನೀರು ತುಂಬಿ ಬೋಟಿನ ಎಂಜಿನ್ ಸ್ಥಗಿತಗೊಂಡಿತ್ತು. ಕೂಡಲೇ ಬೋಟಿನಲ್ಲಿದ್ದವರು ನೀರು ಖಾಲಿ ಮಾಡಲು ಪ್ರಯತ್ನಿಸಿದರೂ ಆಗಲಿಲ್ಲ. ಅನಂತರ ಸಹಾಯಕ್ಕಾಗಿ ಮಲ್ಪೆ ಬಂದರಿನಿಂದ ಶ್ರೀಕೃಷ್ಣ ಬೋಟಿನವರು ಹಾಗೂ ಕೋಸ್ಟ್ ಗಾರ್ಡ್ ಬಂದು ಬೋಟಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.






ಬಳಿಕ ಬೋಟನ್ನು ಶ್ರೀ ಕೃಷ್ಣ ಬೋಟಿನವರು ಹಗ್ಗ ಕಟ್ಟಿ ಎಳೆದು ಗಂಗೊಳ್ಳಿ ಬಂದರಿನಿಂದ ಸುಮಾರು 8-9 ನಾಟಿಕಲ್ ಮೈಲು ದೂರದಲ್ಲಿ ಎಳೆದುಕೊಂಡು ಬರುವಾಗ ಗಾಳಿ ಹಾಗೂ ಅಲೆಗಳ ಅಬ್ಬರದಿಂದಾಗಿ ಹಗ್ಗ ತುಂಡಾಗಿ, ಬೋಟು ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಅಂದಾಜು 60-65 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮಾಲಕ ನಾಗರಾಜ್ ಪುತ್ರನ್ ದೂರಿನಲ್ಲಿ ತಿಳಿಸಿದ್ದಾರೆ. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದೂರು ದಾಖಲಾಗಿದೆ.

error: Content is protected !!
Scroll to Top