(ನ್ಯೂಸ್ ಕಡಬ) newskadaba.com,ಫೆ.23: ಸುಮಾರು 6 ವರ್ಷಗಳ ಹಿಂದೆ ರಾ.ಹೆ. 66 ರ ಕುಂದಾಪುರದ ಹೇರಿಕುದ್ರು ಸೇತುವೆ ಮೇಲೆ ಕೆಎಸ್ ಆರ್ ಟಿಸಿ ಬಸ್ಸನ್ನು ಅಜಾಗರೂಕತೆ, ನಿರ್ಲಕ್ಷ್ಯದಿಂದ ಚಲಾಯಿಸಿ, ಅಪಘಾತ ನಡೆಸಿದ್ದಲ್ಲದೆ,ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸದೇ, ಪರಾರಿಯಾಗಿದ್ದ ಚಾಲಕ ಸಂಜಯ ಶಾನುಭಾಗ್ ಗೆ ದಂಡದ ರೂಪದಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ.
2019ರ ಜು.30 ರ ಬೆಳಗ್ಗೆ ಆರೋಪಿ ಸಂಜಯನು ಹೇರಿಕುದ್ರು ಸೇತುವೆ ಮೇಲೆ ವೇಗವಾಗಿ ಚಲಾಯಿಸಿ, ಎದುರಿನ ವಾಹನ ನೋಡಿ ಒಮ್ಮೆಲೆ ಬ್ರೇಕ್ ಹಾಕಿದ್ದಾನೆ. ಇದರಿಂದ ಪ್ರಯಾಣಿಕರಾದ ನಾಗಮ್ಮ, ಲಲಿತಾ, ರೇಣುಕಾ, ಮಕ್ಕಳಾದ ಆರಾಧ್ಯ, ಐಶ್ವರ್ಯ ಬಸ್ಸಿನೊಳಗೆ ಬಿದ್ದು, ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯದೇ, ಸಮೀಪದ ಠಾಣೆಗೂ ಮಾಹಿತಿ ನೀಡದೇ, ಸ್ಥಳದಿಂದ ಪರಾರಿಯಾಗಿದ್ದ ಚಾಲಕನ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ರುತಿಶ್ರೀ ಆರೋಪಿಗೆ ದಂಡದ ರೂಪದಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ್ ಅವರು ವಾದ ಮಂಡಿಸಿದ್ದರು.








