ಕಾಂಗ್ರೆಸ್ ಮುಕ್ತ ಭಾರತಕ್ಕೆ ಕರ್ನಾಟಕ ಮತ್ತೊಂದು ವೇದಿಕೆಯಾಗಲಿದೆ ► ಕೇರಳ ಬಿಜೆಪಿ ಕಾರ್ಯದರ್ಶಿ ಸುರೇಂದ್ರನ್

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಪ್ರಧಾನಿ ನರೇಂದ್ರ ಮೋದಿಯವರ ಕಾಂಗ್ರೇಸ್ ಮುಕ್ತ ಅಭಿಯಾನಕ್ಕೆ ಕರ್ನಾಟಕ ರಾಜ್ಯ ಮತ್ತೊಂದು ವೇದಿಕೆಯಾಗಲಿದೆ ಎಂದು ಕೇರಳ ರಾಜ್ಯದ ಬಿಜೆಪಿ ಕಾರ್ಯದರ್ಶಿ ಸುರೇಂದ್ರನ್ ಹೇಳಿದರು.

ಅವರು ಬುಧವಾರ ಕಡಬದಲ್ಲಿ ಸಂಜೆ ಸುಳ್ಯ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಪರ ಮತಯಾಚನೆ ಮಾಡುವ ಬಿಜೆಪಿ ಸಭೆಯಲ್ಲಿ ಮಾತನಾಡುತ್ತಿದ್ದರು. ದೇಶದ ಜನರ ಹೃದಯದಲ್ಲಿ ನರೇಂದ್ರ ಮೋದಿಯವರ ಪ್ರತಿಷ್ಠಾಪನೆಯಾಗಿದ್ದಾರೆ, ಇದರಿಂದಾಗಿ ದೇಶದಲ್ಲೆಡೆ ಕಾಂಗ್ರೇಸ್ ಬಾಗಿಲು ಮುಚ್ಚುತ್ತಿದೆ, ಈ ಬಾರಿ ಕರ್ನಾಟಕದ ಬಾಗಿಲು ಕೂಡಾ ಮುಚ್ಚಲಿದ್ದು, ಇದಕ್ಕೆ ವೇದಿಕೆ ಸಿದ್ದವಾಗುತ್ತಿದೆ ಎಂದರು. ರಾಜ್ಯದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೇಸ್ ಸರಕಾರ ಎಲ್ಲಾ ಪಾಪಗಳನ್ನು ಮಾಡಿ ಜನರಿಂದ ತಿರಸ್ಕೃತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ಅಂತೆಯೇ ಸುಳ್ಯದ ಅಜಾತ ಶತ್ರು ಅಂಗಾರ ಮತ್ತೊಮ್ಮೆ ಅಪ್ಪಟ ಬಂಗಾರವಾಗಿ ಮಿಂಚಲಿದ್ದಾರೆ. ಸಿದ್ದರಾಮಯ್ಯ ಸರಕಾರ ಎಲ್ಲಾ ಭಾಗ್ಯಗಳನ್ನು ಕೊಟ್ಟು ರಾಜ್ಯ ರೈತರಿಗೆ ಮೃತ್ಯು ಭಾಗ್ಯ ಕರುಣಿಸಿ ರೈತರ ಹಿತವನ್ನು ಮರೆತಿದೆ, ಇದರ ಫಲವಾಗಿ ರೈತ ನಾಯಕ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತವಾಗಿದೆ ಎಂದು ಹೇಳಿದ  ಸುರೇಂದ್ರನ್ ರಾಹುಲ್ ಗಾಂಧಿಗೆ ಕಾಂಗ್ರೇಸ್ ಪಟ್ಟಾಭಿಷೇಕ ಮಾಡಿದ ಅಮ್ಮ ಅವರನ್ನು ಪ್ರಧಾನಿಯಾಗಿ ನೋಡುವ ಕನಸು ಕಾಣುತ್ತಿದ್ದಾರೆ, 2029 ರಲ್ಲೂ ಮೋದಿಯೇ ಪ್ರಧಾನಿಯಾಗಲಿದ್ದಾರೆ ಎನ್ನುವ ವಾಸ್ತವ ಅವರಿಗೆ ಗೊತ್ತಿಲ್ಲ. ಇತ್ತ ರಾಹುಲ್ ಗಾಂಧಿ ದಿನಾ ಪ್ರಧಾನಿ ಕನಸು ಕಂಡು ಮಂಚದಿಂದ ಕೆಳಗೆ ಬೀಳುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು ಕಾಂಗ್ರೇಸ್ ಪಕ್ಷ ಆತಂಕವಾದಿಗಳಿಗೆ ಪ್ರೋತ್ಸಾಹ ನೀಡುತ್ತಾ ದೇಶವನ್ನು ಕೊಳ್ಳೆ ಹೊಡೆದ ಪಕ್ಷವಾಗಿದೆ, ರಾಜ್ಯದಲ್ಲಿ 23 ಕೊಲೆ ಮಾಡಿಸಿದ ಸಿದ್ದರಾಮಯ್ಯ ಇಲ್ಲಿನ ಎಸ್ಡಿಪಿಐ ಎಂಬ ದೇಶದ್ರೋಹಿ ಸಂಘಟನೆಯೊಂದಿಗೆ ಕೈಜೋಡಿಸಿ ರಾಜ್ಯದಲ್ಲಿ ಅರಾಜಕತೆ ಸೃಷ್ಠಿಸಲು ಹೊರಟಿದ್ದಾರೆ ಎಂದು ಹೇಳಿದ ಸುರೇಂದ್ರನ್ ನಮ್ಮ ರಾಜ್ಯದ ಒಬ್ಬ ಕಳ್ಳ ಮುಖ್ಯಮಂತ್ರಿ ಆಗಿದ್ದ ಉಮ್ಮನ್ ಚಾಂಡಿ ಅಲ್ಲಿ ಕಾಂಗ್ರೇಸ್ ನ್ನು ಮುಗಿಸಿ ಇಲ್ಲಿ ಕಾಂಗ್ರೇಸ್ ಬಾಗಿಲು ಮುಚ್ಚಲು ಬಂದಿದ್ದಾರೆ, ಇವರನ್ನು ಯಾರೂ ನಂಬುವುದಿಲ್ಲ, ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಇರುವಾಗ ಕರ್ನಾಟಕದಲ್ಲೂ ಅದೇ ಪಕ್ಷ ಬೇಕು ಎಂದು ರರಾಜ್ಯದ ಜನತೆ ತೀರ್ಮಾನ ಮಾಡಿದ್ದಾರೆ ಎಂದರು.

ಸಂಸದ ನಳಿನ್ ಕುಮಾರ್ ಮಾತನಾಡಿ ನಳಿನ್ ಕುಮಾರ್ ಸುಳ್ಳುಗಾರ ಎಂದು ಹೇಳುವ ಉಸ್ತುವಾರಿ ಸಚಿವ ರಮಾನಾಥ ರೈ ಒಬ್ಬ ಮೋಸಗಾರ ರಾಜ್ಯದಲ್ಲಿ ಯಡಿಯೂರಪ್ಪ ಸರಕಾರ ಇದ್ದಾಗ ಬಂಟ್ವಾಳದಲ್ಲಿ ಅಭಿವೃದ್ಧಿಯಾಗಿತ್ತು, ಅದು ಬಿಟ್ಟರೆ ಬೇರೆ ಅಭಿವೃದ್ಧಿ ಶೂನ್ಯ, ಅದೇ ಅವಧಿಗೆ ಸುಳ್ಯ ಶಾಸಕ ಅಂಗಾರ ನೂರು ಕೋಟಿ ಅನುದಾನ ತಂದಿದ್ದಾರೆ ಇದಕ್ಕೆ ನಾನು ದಾಖಲೆ ನೀಡಬಲ್ಲೆ ಎಂದರು. ಅಭ್ಯರ್ಥಿ ಅಂಗಾರ ಮಾತನಾಡಿ ಅತ್ಯಧಿಕ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿ ಬಜೆಪಿ ಮುಖಂಡರಾದ ಎಸ್.ಎನ್ ಮನ್ಮಥ, ಎ.ವಿ. ತೀರ್ಥರಾಮ, ಭಾಗೀರಥಿ ಮುರುಳ್ಯ, ಪುಲಸ್ತ್ಯಾ ರೈ, ಮನೋಹರ ರೈ, ಸತೀಶ್ ನಾಯಕ್, ಕಿಶೋರ್ ಶಿರಾಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃಷ್ಣ ಶೆಟ್ಟಿ ಕಡಬ ಸ್ವಾಗತಿಸಿದರು. ವಾಡ್ಯಪ್ಪ ಗೌಡ ಎರ್ಮಾಯಿಲ್ ವಂದಿಸಿದರು. ಸಭೆಯ ಬಳಿಕ ಕಡಬ ಪೇಟೆಯಲ್ಲಿ ಬೃಹತ್ ರೋಡ್ ಶೋ ನಡೆಯಿತು.

error: Content is protected !!

Join the Group

Join WhatsApp Group