ಮನೆಯಲ್ಲೇ ನಡೆಯುತ್ತಿತ್ತು ಜೂಜಾಟ: ಪೊಲೀಸರ ಮಿಂಚಿನ ದಾಳಿ, 8 ಜನ ವಶಕ್ಕೆ.



(ನ್ಯೂಸ್ಕಡಬ) newskadaba.com,  ಫೆ.11: ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ಬೆಟ್ಟು ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಇಸ್ಪೀಟ್ ಜುಗಾರಿ ಆಟ ನಡೆಯುತ್ತಿದ್ದ ಅಡ್ಡೆಗೆ ಕಾರ್ಕಳ ನಗರ ಪೊಲೀಸ್ ಠಾಣಾ ಸಿಬ್ಬಂದಿ ದಾಳಿ ನಡೆಸಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.ಪ್ರಕರಣದ ಆರೋಪಿಗಳಾದ ಅಬ್ದುಲ್ ಅಜೀಜ್ (40), ಸತೀಶ ಎಸ್. ಪ್ರಭು (49), ಉಮ್ಮರ ಫಾರೂಕ್ (62), ಅಬ್ದುಲ್ ರಹಿಮಾನ್ (49), ಸುಲೇಮಾನ್ (45),ಸಮೀರ್ (46), ಇರ್ಫಾನ್ (26) ಹಾಗೂ ಚೇತಕ್ (38) ಪ್ರಕರಣದ ಆರೋಪಿಗಳು.





ಅಶೋಕ ಎಂಬುವರಿಗೆ ಸೇರಿದ ಸಾದ್ವಿನ್ ಎಂಬ ಮನೆಯ ಮೊದಲ ಮಹಡಿಯಲ್ಲಿ ಆರೋಪಿತರು ಮಂಗಳೂರಿನ ಅಪ್ರಿತ್ ಹಾಗೂ ನಿಶಾಂತ ಎಂಬವರೊಂದಿಗೆ ಸೇರಿಕೊಂಡು ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳಿಂದ ‘ಅಂದರ್ – ಬಾಹರ್’ ಎಂಬ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.






ಈ ಮಾಹಿತಿ ಮೇರೆಗೆ ಪಿಎಸ್ಐ ಮುರುಳೀಧರ ನಾಯ್ಕ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದರು. ದಾಳಿಯ ವೇಳೆ ಜುಗಾರಿ ಆಟಕ್ಕೆ ಬಳಸಲಾಗುತ್ತಿದ್ದ ರೂ.22,690 ನಗದು, 52 ಇಸ್ಪೀಟ್ ಎಲೆಗಳು, 16 ಹೊಸ ಇಸ್ಪೀಟ್ ಎಲೆಗಳ ಪ್ಯಾಕೆಟ್, 10 ಪ್ಲಾಸ್ಟಿಕ್ ಕುರ್ಚಿಗಳು, 4 ಪ್ಲಾಸ್ಟಿಕ್ ಟೇಬಲ್ ಗಳು ಹಾಗೂ 9 ಮೊಬೈಲ್ ಫೋನ್ ಗಳನ್ನು ಪೊಲೀಸರು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡಿದ್ದಾರೆ. ಘಟನೆಯ ಸಮಯದಲ್ಲಿ  3 ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!
Scroll to Top