ಮಂಗಳೂರು : ಕಂಬಳಕ್ಕೂ ತಟ್ಟಿದ ಚಿನ್ನದ ದರ ಏರಿಕೆಯ ಹೊಡೆತ!



(ನ್ಯೂಸ್‌ ಕಡಬ) newskadaba.com,ಫೆ.03 ಮಂಗಳೂರು: ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಗುರುತಿಸುವಂತಹ ಕಂಬಳಕ್ಕೂ ಇದೀಗ ಚಿನ್ನದ ದರ ಏರಿಕೆಯ ನೇರ ಪರಿಣಾಮ ತಟ್ಟಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ನಾಗಾಲೋಟದಂತೆ ಏರಿಕೆಯಾಗುತ್ತಿದ್ದು, ಇದರ ಹೊರೆ ಕಂಬಳ ಕೂಟಗಳ ಮೇಲೂ ಹೆಚ್ಚಾಗಿದೆ. ಸದ್ಯ ಚಿನ್ನದ ದರ ಇಳಿಕೆಯ ಯಾವುದೇ ಲಕ್ಷಣಗಳು ಕಾಣಿಸದೇ ಇರುವ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಇನ್ನಷ್ಟು ಏರಿಕೆ ಸಂಭವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಇದರ ಪರಿಣಾಮವಾಗಿ ಕಂಬಳ ಸಂಘಟಕರಿಗೆ ಬಹುಮಾನವಾಗಿ ನೀಡಬೇಕಾದ ಚಿನ್ನದ ವೆಚ್ಚ ಭಾರವಾಗುತ್ತಿದೆ.





ಈ ಕುರಿತು ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವಾ ದೇವಿಪ್ರಸಾದ್ ಶೆಟ್ಟಿ, “ಕಂಬಳಕ್ಕೂ ಚಿನ್ನಕ್ಕೂ ಅವಿನಾಭಾವ ಸಂಬಂಧವಿದೆ. ಕಂಬಳ ಕೋಣಗಳ ಯಜಮಾನರು ತಮ್ಮ ಕೋಣಗಳನ್ನು ಮಕ್ಕಳಂತೆ ಸಾಕಿ, ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಾರೆ. ಅವರ ಗುರಿ ಕಂಬಳ ಕೂಟದಲ್ಲಿ ಚಿನ್ನದ ಪದಕ ಗೆಲ್ಲುವುದೇ ಆಗಿರುತ್ತದೆ. ಆದ್ದರಿಂದ ಎಷ್ಟೇ ಕಷ್ಟವಾದರೂ ಕಂಬಳದಲ್ಲಿ ಚಿನ್ನದ ಪದಕ ನೀಡುವುದು ನಮ್ಮ ಕರ್ತವ್ಯ” ಎಂದು ಹೇಳಿದರು.






ಕಂಬಳದ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ಐಪಿಎಲ್ ಮಾದರಿಯಲ್ಲಿ ಮೆಗಾ ಸ್ಪಾನ್ಸರ್‌ಗಳನ್ನು ಕರೆತರಲು ಚಿಂತನೆ ನಡೆಸಲಾಗುತ್ತಿದೆ ಎಂದ ಅವರು, “ಕರಾವಳಿ ಭಾಗದ ಜೊತೆಗೆ ಬೆಂಗಳೂರು, ಮುಂಬೈ ಹಾಗೂ ದುಬೈಯ ಉದ್ಯಮಿಗಳನ್ನು ಮೆಗಾ ಸ್ಪಾನ್ಸರ್‌ಗಳಾಗಿ ಬಳಸಿಕೊಳ್ಳುವ ಯೋಜನೆ ಇದೆ. ಮುಂದಿನ ವರ್ಷದಿಂದಲೇ ಇದನ್ನು ಕಾರ್ಯಗತಗೊಳಿಸಲು ತಯಾರಿ ನಡೆಸಿದ್ದೇವೆ” ಎಂದು ಮಾಹಿತಿ ನೀಡಿದರು.

error: Content is protected !!
Scroll to Top