(ನ್ಯೂಸ್ ಕಡಬ) newskadaba.com,ಜ.19 ಮಂಗಳೂರು: ಜಾಗತಿಕ ವೃತ್ತಿಪರ ಸೇವೆಗಳ ಪ್ರಮುಖ ಸಂಸ್ಥೆಯಾದ ಡೆಲಾಯ್ಟ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಬಲಪಡಿಸಲು ಮುಂದಾಗಿದ್ದು, ಸುಮಾರು 50,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ. ಅಲ್ಲದೆ, ಕರಾವಳಿ ನಗರಿ ಮಂಗಳೂರಿನಲ್ಲಿಯೂ ತನ್ನ ಶಾಖೆಯನ್ನು ತೆರೆಯುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಡೆಲಾಯ್ಟ್ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ನಡೆದ ಸ್ಟಾರ್ಟಪ್ಗಳ ಸಮಾವೇಶವಾದ ‘ಟೈಕಾನ್ ಮಂಗಳೂರು 2026’ ನಲ್ಲಿ ಟೈ ಮಂಗಳೂರು ಅಧ್ಯಕ್ಷ ರೋಹಿತ್ ಭಟ್ ಅವರೊಂದಿಗಿನ ಸಂವಾದದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದರು.
ಮಂಗಳೂರಿಗೆ ಬರೋದು ಗ್ಯಾರಂಟಿ!
ಎರಡನೇ ಸ್ಥರದ ನಗರಗಳ ಬೆಳವಣಿಗೆಯ ಮಹತ್ವವನ್ನು ಒತ್ತಿ ಹೇಳಿದ ರೋಮಲ್ ಶೆಟ್ಟಿ, “ಡೆಲಾಯ್ಟ್ ಮಂಗಳೂರಿಗೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಕೇವಲ ಸಮಯದ ಪ್ರಶ್ನೆಯಷ್ಟೇ. ನಾವು ಈಗಾಗಲೇ ಮಂಗಳೂರಿಗೆ ಬರುವ ಹಂತಕ್ಕೆ ತಲುಪಿದ್ದೇವೆ. ಇಲ್ಲಿ ಅದ್ಭುತವಾದ ಪ್ರತಿಭೆಗಳಿದ್ದಾರೆ,” ಎಂದು ಹೇಳಿದರು








