ಶಾಸಕ ಅಂಗಾರರ ಮುಖವನ್ನೇ ನೋಡಿಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ► ಕಾಂಗ್ರೆಸ್‌ನ ದಬ್ಬಾಳಿಕೆ ನೀತಿಯನ್ನು ತೋರಿಸುತ್ತದೆ: ಬಿಜೆಪಿ ಮುಖಂಡ ಮುಳಿಯ ಕೇಶವ ಭಟ್

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.05. ಇಂಧನ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಅವರು ಸುಳ್ಯ ಶಾಸಕ ಎಸ್.ಅಂಗಾರ ಮುಖವನ್ನೇ ನಾನು ಕಂಡಿಲ್ಲ ಎಂದು ಏಕವಚನದಲ್ಲಿ ಕೀಳಾಗಿ ಮಾತನ್ನಾಡಿದ್ದು, ಇದು ಕಾಂಗ್ರೆಸ್ಸಿನ ದಬ್ಬಾಳಿಕೆ ನೀತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಸುಳ್ಯ ಮಂಡಲ ಸಮಿತಿ ಮಾಧ್ಯಮ ಪ್ರಮುಖರಾದ ಮುಳಿಯ ಕೇಶವ ಭಟ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ಶಾಸಕರನ್ನು ಮೆಟ್ಟಿ ನಿಲ್ಲುವ ಕಾಂಗ್ರೆಸ್ಸಿನ ಇಂತಹ ಪ್ರವೃತ್ತಿಯನ್ನು ನಾವು ಖಂಡಿಸುತ್ತೇವೆ. ದಲಿತ ವರ್ಗದವರನ್ನು ಕಾಂಗ್ರೆಸ್‌ನವರು ಎಷ್ಟು ಕೀಳಾಗಿ ಕಾಣುತ್ತಾರೆ ಎನ್ನುವುದಕ್ಕೆ ಡಿ.ಕೆ. ಶಿವಕುಮಾರ್ ಮಾತುಗಳೇ ಸಾಕ್ಷಿಯಾಗಿದೆ. ಇಂತಹ ಉಡಾಫೆಯ ಮಾತುಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಅನಧಿಕೃತ ಗಣಿಗಾರಿಕೆ, ಭೂ ಹಗರಣ, ಸೋಲಾರ್ ಹಗರಣಗಳಲ್ಲಿ ಭಾಗಿಯಾಗಿರುವ ಡಿ.ಕೆ.ಶಿ ಯವರಿಂದ ನಮ್ಮ ಶಾಸಕರು ಪಾಠ ಕಲಿಯಬೇಕಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ಚನಿಯ ಕಲ್ತಡ್ಕ, ನವೀನ್ ರೈ ಮೇನಾಲ, ಚಂದ್ರಾ ಕೋಲ್ಚಾರ್, ಚುನಾವಣಾ ಉಸ್ತುವಾರಿ ಎ.ವಿ. ತೀರ್ಥರಾಮ, ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group