(ನ್ಯೂಸ್ ಕಡಬ) newskadaba.com, ಡಿ.02 ಸುಳ್ಯ: ಶ್ರೀರಾಮ ಪೇಟೆಯಲ್ಲಿರುವ ಸಿಂಧೂರ ಜ್ಯುವೆಲ್ಲರ್ಸ್ ನಿಂದ ಕಳ್ಳರು ಅವರ ಕೈಚಳಕದಿಂದ 15 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳನ್ನು ಅಪಹರಿಸಿರುವ ಘಟನೆಯು ತಡವಾಗಿ ವರದಿಯಾಗಿದೆ.
ಸೆಪ್ಟೆಂಬರ್ 26ರಂದು ಮಧ್ಯಾಹ್ನ 1 ಗಂಟೆಗೆ ಚಿನ್ನದ ಅಂಗಡಿಗೆ ಬಂದ ಟಿಪ್ಟಾಪ್ ಡ್ರೆಸ್ ಮಾಡಿಕೊಂಡಿದ್ದ ಇಬ್ಬರು ಪುರುಷರು ಚಿನ್ನದ ಸರ ಬೇಕೆಂದು ಹೇಳಿ, ಅಂಗಡಿಯ ಮಾಲಕ ವಸಂತ್ ಆಚಾರ್ಯರು ಮತ್ತು ಸೇಲ್ಸ್ನವರು ಸರಗಳನ್ನು ತೋರಿಸುತ್ತಿರುವಾಗ ಗ್ರಾಹಕರಾಗಿ ಬಂದವರು ಸರಗಳ ಕಟ್ಟುಗಳಿದ್ದ ಬಾಕ್ಸ್ ಗೆ ಕೈ ಹಾಕಿದರೆಂದೂ, ಆಗ ಮಾಲಕ ವಸಂತರು, ಕೈ ಹಾಕುವುದು ಬೇಡ ಎಂದು ಹೇಳಿದಾಗ ಕೂಡಲೇ ಅವರು ಕೈ ಹಿಂತೆಗೆದುಕೊಂಡರೆಂದೂ ಹೇಳಲಾಗಿದೆ. ಬಳಿಕ ಸ್ವಲ್ಪ ಹೊತ್ತು ಬೇರೆ ಬೇರೆ ಆಭರಣಗಳನ್ನು ನೋಡಿ ಖರೀದಿ ಮಾಡದೆ ವಾಪಸ್ ಹೋದರೆನ್ನಲಾಗಿದೆ.
ಸುಮಾರು 10 ದಿನ ಕಳೆದ ನಂತರ ಚಿನ್ನದ ಸರದ ಕಟ್ಟುಗಳಿದ್ದ ಬಾಕ್ಸ್ನಲ್ಲಿ 15 ಚಿನ್ನದ ಸರಗಳಿದ್ದ ಒಂದು ಕಟ್ಟು ಕಾಣೆಯಾಗಿರುವುದು..ವಸಂತರ ಗಮನಕ್ಕೆ ಬಂದಿದೆ. ಅವರು ತನ್ನ ಅಂಗಡಿಯಲ್ಲಿರುವ ಸಿ.ಸಿ. ಕ್ಯಾಮರಾಗಳು ಸೆರೆ ಹಿಡಿದಿರುವ ದೃಶ್ಯಗಳನ್ನು ಪರಿಶೀಲಿಸತೊಡಗಿದರು. ಆಗ 10 ದಿನಗಳ ಹಿಂದೆ ಮಧ್ಯಾಹ್ನ ಬಂದಿದ್ದ ಈ ಇಬ್ಬರು ಗ್ರಾಹಕರು, ಚಿನ್ನದ ಕಟ್ಟುಗಳಿದ್ದ ಬಾಕ್ಸ್ಗೆ ಕೈ ಹಾಕಿದ್ದು, ಕೈ ಹಾಕಬೇಡಿರೆಂದು ತಾನು ಹೇಳಿದ ಕೂಡಲೇ ಅವರು ಕೈ ಹೊರತೆಗೆದುಕೊಂಡದ್ದು ಕಂಡು ಬಂತು. ಮತ್ತು ಸೂಕ್ಷ್ಮವಾಗಿ ನೋಡಿದಾಗ, ಬಾಕ್ಸ್ ನಿಂದ ಕೈ ಹಿಂತೆಗೆದುಕೊಳ್ಳುವಾಗಲೇ ಎಡಗೈಯ ಕಿರುಬೆರಳು, ಉಂಗುರ ಬೆರಳು ಮತ್ತು ನಡುಬೆರಳನ್ನು ಮಡಚಿ ಒಂದು ಕಟ್ಟನ್ನು ಎಗರಿಸಿರುವುದು ಕಂಡು ಬಂತು.
ಬಳಿಕ ಸಂಪೂರ್ಣ ಸಾಕ್ಷಿ ಸಮೇತ ವಸಂತ ಆಚಾರ್ಯರು ಪೋಲೀಸರಿಗೆ ದೂರು ನೀಡಿದ್ದಾರೆ. ಪೋಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಸಿದ್ದಾರೆ೦ದೂ, ಕಳ್ಳರು ಚೆನ್ನೈಯವರೆಂದೂ ಗೊತ್ತಾಗಿರುವುದಾಗಿ ತಿಳಿದು ಬಂದಿದೆ. ಅವರನ್ನು ಬಲೆಗೆ ಕೆಡವಲು ಪೋಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ.








