(ನ್ಯೂಸ್ ಕಡಬ) newskadaba.com, ನ.25: ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠದ ವತಿಯಿಂದ ನೀಡುವ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಟಾನದ ಅಧ್ಯಕ್ಷ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ಅವರಿಗೆ ಲಭಿಸಿದೆ. ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿಶ್ವಗೀತಾ ಪರ್ಯಾಯ 2024-26ರ ಪ್ರಯುಕ್ತ ನಡೆದ ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ನೀಡುವ ಶ್ರೀಕೃಷ್ಣಾಗೀತಾನುಗ್ರಹ ಪ್ರಶಸ್ತಿಯನ್ನು ಪುರೋಹಿತ ನಾಗರಾಜ ಭಟ್ ಅವರಿಗೆ ನೀಡಿ ಗೌರವಿಸಲಾಯಿತು.
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿದರು. ಕಳೆದ 25 ವರ್ಷಗಳಿಂದ ವೇದ ಶಿಬಿರಗಳ ಮೂಲಕ ವೇದಾಧ್ಯಯನ ನಡೆಸುವ ವಿಶೇಷ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಥುರ ವೃಂದಾವನ ಧಾಮದ ಕಥಾವ್ಯಾಸ್ ಅತುಲ್ ಕೃಷ್ಣ ಭಾರದ್ವಾಜ್ ಮಹಾರಾಜ್ ಸಂತ ಸಂದೇಶ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಆಯುರ್ವೇದ ವೈದ್ಯರಾದ ತನ್ಮಯ ಗೋಸ್ವಾಮಿ, ಶ್ರೀ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.








