ಅನ್ನಭಾಗ್ಯ ಯೋಜನೆ: ಇಂದಿರಾ ಆಹಾರ ಕಿಟ್ ನಲ್ಲಿ ಹೆಸರುಕಾಳಿನ ಬದಲು ತೊಗರಿ ಬೇಳೆ ನೀಡಲು ತೀರ್ಮಾನ



(ನ್ಯೂಸ್‌ ಕಡಬ) newskadaba.com,  ನ.06:   ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ಘೋಷಿಸಿದ್ದ ಸರ್ಕಾರ, ಅದರಲ್ಲಿ ನೀಡಲು ಉದ್ದೇಶಿಸಿದ್ದ ಆಹಾರ ಧಾನ್ಯಗಳನ್ನು ಪರಿಷ್ಕರಣೆ ಮಾಡಿದೆ.





ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದ್ದು, ‘ಇಂದಿರಾ ಪೌಷ್ಟಿಕ ಆಹಾರ ಕಿಟ್’ ಬದಲು ಇಂದಿರಾ ಕಿಟ್ ಎಂದು ತೀರ್ಮಾನಿಸಿದೆ. ಅಲ್ಲದೆ, ಕಿಟ್‌ನಲ್ಲಿ ಇರಬೇಕಿದ್ದ ಹೆಸರುಕಾಳಿನ ಬದಲು ಹೆಚ್ಚುವರಿ ತೊಗರಿಬೇಳೆ ನೀಡಲು ನಿರ್ಧರಿಸಿದೆ.






ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಬಿಪಿಎಲ್ ಮತ್ತು ಅಂತ್ಯೋದಯ ಅನ್ನ ಕಾರ್ಡುದಾರರಿಗೆ ತಲಾ 5 ಕೆ.ಜಿ. ಕೊಡುವ ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರವು 6,426 ಕೋಟಿ ರೂ. ಅನುದಾನ ನಿಗದಿಪಡಿಸಿತ್ತು. ಅಕ್ಕಿಯ ಬದಲು ತೊಗರಿಬೇಳೆ, ಹೆಸರುಕಾಳು, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಒಳಗೊಂಡ ಇಂದಿರಾ ಕಿಟ್‌ನ್ನು 6,119 ಕೋಟಿ ರೂ.ನಲ್ಲಿ ಕೊಡಲು ನಿರ್ಧರಿಸಿದ್ದೆವು.

ಇದರಿಂದ 307 ಕೋಟಿ ರೂ. ಉಳಿಸಿದಂತೆಯೂ ಆಗಿತ್ತು. ರಾಜ್ಯದ ತೊಗರಿ ಬೆಳೆಗಾರರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮತ್ತು ಪಡಿತರ ಚೀಟಿದಾರರಿಗೆ ಹೆಚ್ಚಿನ ಪ್ರೋಟಿನ್‌ಯುಕ್ತ ಆಹಾರ ಧಾನ್ಯ ಒದಗಿಸಲು ಹೆಸರುಕಾಳಿನ ವೆಚ್ಚದ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚುವರಿಯಾಗಿ ತೊಗರಿಬೇಳೆಯನ್ನೇ ವಿತರಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದರು.

error: Content is protected !!
Scroll to Top