ಕಡಬ: ಜೀವಾವಧಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ► ಚಿಕ್ಕಮಗಳೂರಿನಿಂದ ಬಂದು ಕಡಬದಲ್ಲಿ ಮದುವೆಯಾಗಿದ್ದ ಕೊಲೆ ಆರೋಪಿ

(ನ್ಯೂಸ್ ಕಡಬ) newskadaba.com ಕಡಬ, ಎ.28. ಕೊಲೆ‌ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ 2006 ರಲ್ಲಿ ಪೆರೋಲ್ ಮೇಲೆ ಬಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಠಾಣಾ ಪೊಲೀಸರ ಸಹಕಾರದೊಂದಿಗೆ ಚಿಕ್ಕಮಗಳೂರು ಪೊಲೀಸರು ಶನಿವಾರದಂದು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಠಾಣಾ ವ್ಯಾಪ್ತಿಯಲ್ಲಿ 2002 ರಲ್ಲಿ ಕೊಲೆ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚಿಕ್ಕಮಗಳೂರು ಮೂಲದ ಮಹಮ್ಮದ್ ಕಾಸಿಂ ಎಂಬವರ ಪುತ್ರ ಅಬ್ದುಲ್ ಘನಿ (40) ಪೆರೋಲ್ ಮೇಲೆ ಬಂದಿದ್ದು, ಆ ನಂತರ ತಲೆಮರೆಸಿಕೊಂಡಿದ್ದನೆನ್ನಲಾಗಿದೆ. ಆ ನಂತರ ತನ್ನ ಹೆಸರನ್ನು ಶಾಕಿರ್ ಎಂದು ಗುರುತಿಸಿಕೊಂಡು ಕಳೆದ ಸುಮಾರು ಹನ್ನೊಂದು ವರ್ಷಗಳ ಹಿಂದೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಪೆರ್ಜಿ ಎಂಬಲ್ಲಿನ ಮಹಿಳೆಯನ್ನು ವಿವಾಹವಾಗಿದ್ದ ಈತ ಇಲ್ಲಿಯೇ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದನೆನ್ನಲಾಗಿದೆ‌. 2017 ರ ನವೆಂಬರ್ ತಿಂಗಳಲ್ಲಿ ರಾಮಕುಂಜದಲ್ಲಿ ಆಡು ಕದ್ದು ಸಿಕ್ಕಿಬಿದ್ದಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ‌.

Also Read  ಕುಂತೂರು: ಬೈಕ್ ಸ್ಕಿಡ್ ಆಗಿ ಪಲ್ಟಿ ► ಬಾಲಕ ಗಂಭೀರ, ಸವಾರ ಪಾರು

ಆರೋಪಿಯು ಕಡಬ ಠಾಣಾ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶನಿವಾರದಂದು ಕಡಬಕ್ಕೆ ಆಗಮಿಸಿದ ಚಿಕ್ಕಮಗಳೂರು ಪೊಲೀಸರು ಕಡಬ ಠಾಣಾ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಕಡಬ ಠಾಣಾ ಉಪ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ, ಸಿಬ್ಬಂದಿಗಳಾದ ತಾರಾನಾಥ, ಶಿವಪ್ರಸಾದ್, ಸತೀಶ್, ಜೀಪು ಚಾಲಕ ಕನಕರಾಜ್ ಭಾಗವಹಿಸಿದ್ದರು.

Also Read  ಸುಳ್ಯ: 110 ಕೆ.ವಿ. ಸಬ್‌ಸ್ಟೇಷನ್‌ ಗಾಗಿ ಸರ್ವೆ ➤ 2,600 ಮರಗಳಿಗೆ ಬೀಳಲಿದೆ ಕೊಡಲಿಯೇಟು

error: Content is protected !!
Scroll to Top